ಅರಸೀಕೆರೆ: ತಾಲೂಕಿನ ಕಸಬಾ, ಗಂಡಸಿ, ಜಾವಗಲ್ ಸೇರಿ ಹಲವೆಡೆ ಮಂಗಳವಾರ ಸಂಜೆ ಮಿಂಚು, ಗುಡುಗು ಸಹಿತ ಉತ್ತಮ ಮಳೆಯಾಗಿದ್ದು ಸಣ್ಣಪುಟ್ಟ ಕೆರೆ, ಕಟ್ಟೆಗಳಿಗೆ ಅಪಾರ ಪ್ರಮಾಣದ ನೀರು ಹರಿದುಬಂದಿದೆ.
ನಗರದಲ್ಲಿ ತಾಸುಗಟ್ಟಲೆ ಅಬ್ಬರಿಸಿದ ವರುಣಾರ್ಭಟಕ್ಕೆ ಚರಂಡಿಗಳು ಉಕ್ಕಿ ಹರಿದರೆ, ಹಾಸನ ರಸ್ತೆ, ಕಾಳನಕೊಪ್ಪಲು ಬಡಾವಣೆಗೆ ಸಂಪರ್ಕ ಕಲ್ಪಿಸುವ ರೈಲ್ವೆ ಕೆಳಸೇತುವೆ ಜಲಾವೃತವಾಗಿದ್ದು ಪ್ರಯಾಣಿಕರು ಪರದಾಡುವಂತಾಗಿತ್ತು. ಮುಂಗಾರು ಪೂರ್ವ ಮಳೆಯ ಸಿಂಚನದಿಂದಾಗಿ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದ್ದು ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿಸಿದೆ.