ಬಸವಕಲ್ಯಾಣ: ಹತ್ತರ್ಗಾ(ಎಸ್) ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ ಶನಿವಾರ ಭೇಟಿ ನೀಡಿದ ಶಾಸಕ ಶರಣು ಸಲಗರ, ಶಾಲೆ ಮಾಳಿಗೆ ಮಳೆ ನೀರಿನಿಂದ ಸೋರುತ್ತಿರುವುದನ್ನು ಪರಿಶೀಲಿಸಿದರು.
ಶಾಲೆ ಕಟ್ಟಡ ಹಳೆಯದಾಗಿದ್ದು, ಮೂರು ಕೋಣೆಗಳು ಮಳೆ ನೀರಿನಿಂದ ಸೋರುತ್ತಿವೆ. ಹೀಗಾಗಿ ವಿದ್ಯಾರ್ಥಿಗಳು ಸಮಸ್ಯೆ ಎದುರಿಸಬೇಕಾಗುತ್ತಿದೆ. ಪರಿಹಾರಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು. ಶಾಲೆಗೆ ಸುತ್ತುಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಶಾಸಕರಲ್ಲಿ ಮನವಿ ಮಾಡಿದರು.
ಲೋಕೋಪಯೋಗಿ ಇಲಾಖೆಯ ಎಇಇ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿದ ಶಾಸಕರು, ಶಿಥಿಲಾವಸ್ಥೆಯಲ್ಲಿರುವ ಶಾಲೆ ಕೋಣೆಗಳನ್ನು ತೆರವುಗೊಳಿಸುವ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿ ವರದಿ ಸಲ್ಲಿಸಿದ್ದು, ತಕ್ಷಣ ತೆರವು ಮಾಡಬೇಕು ಎಂದು ಸೂಚಿಸಿದರು. ತೆರವು ಕೆಲಸ ಮುಗಿದ ನಂತರ ಹೊಸದಾಗಿ ಎರಡು ಕೋಣೆ ನಿರ್ಮಾಣಕ್ಕೆ ಅನುದಾನ ಕಲ್ಪಿಸಿ, ಆದಷ್ಟು ಬೇಗ ಕಾಮಗಾರಿ ಆರಂಭಿಸಲಾಗುವುದು. ಶಿಕ್ಷಣಕ್ಕೆ ಯಾವುದೇ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮುಖ್ಯಗುರು ಅರುಣಾದೇವಿ, ಜ್ಞಾನೇಶ್ವರ ಮುಳೆ, ಬಸವಯ್ಯ ಸ್ವಾಮಿ, ಶರಣು ಬಿರಾದಾರ, ದತ್ತು ಮೇಸ್ತ್ರಿ, ಮಲ್ಲಿನಾಥ ಬಿ, ರಾಜಕುಮಾರ ಪಾಟೀಲ್, ಕಲ್ಯಾಣರಾವ ಪಾಟೀಲ್, ಪ್ರಕಾಶ ಪಾಟೀಲ್, ಭೀಮಾ ಇದ್ದರು.
ಭೇಟಿ: ಗಿಲ್ಕಿ ಗ್ರಾಮದ ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ ಶಾಸಕ ಸಲಗರ, ಹೊಸದಾಗಿ ಎರಡು ಕೋಣೆ ಮತ್ತು ಅಂಗನವಾಡಿ ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ಕಲ್ಪಿಸುವುದಾಗಿ ತಿಳಿಸಿದರು.