ರಟ್ಟಿಹಳ್ಳಿ: ಪಟ್ಟಣದ ಹಳೇ ಬಸ್ ನಿಲ್ದಾಣ ಬಳಿಯ ಹಜರತ್ ಮುಂಡೇಶಾವಲಿಯ ದರ್ಗಾವನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ತಂಡ ಮಂಗಳವಾರ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಸರ್ವೆ ನಡೆಸಿತು.
ಹಾವೇರಿ ಉಪವಿಭಾಗಾಧಿಕಾರಿ ಎನ್. ತಿಪ್ಪೇಸ್ವಾಮಿ ಮಾತನಾಡಿ, ಧಾರವಾಡ ಉಚ್ಚನ್ಯಾಯಾಲಯದ ನಿರ್ದೇಶನದಂತೆ ದರ್ಗಾವನ್ನು ಸರ್ವೆ ಅಧಿಕಾರಿಗಳ ಮೂಲಕ ಅಳತೆ ಮಾಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
ಮುಸ್ಲಿಂ ಸಮುದಾಯದವರೊಂದಿಗೆ ಚರ್ಚೆ: ಸರ್ವೆ ಕಾರ್ಯಕ್ಕೆ ಆಗಮಿಸಿದ್ದ ಅಧಿಕಾರಿಗಳೊಂದಿಗೆ ಮುಸ್ಲಿಂ ಸಮುದಾಯದ ಕೆಲವರು ಮಾತನಾಡಿ, ‘ಈಗಾಗಲೇ ನ್ಯಾಯಾಲಯದ ನಿರ್ದೇಶನದಂತೆ ಎಲ್ಲ ಮುಸ್ಲಿಮರು ಕೂಡಿಕೊಂಡು ದರ್ಗಾದ ಕೆಲ ಭಾಗವನ್ನು ತೆರವುಗೊಳಿಸಲಾಗಿದೆ. ಆದರೆ, ತೆರವುಗೊಳಿಸಿರುವುದರ ಬಗ್ಗೆ ನೀವು ನಮಗೆ ಮಾಹಿತಿ ನೀಡಿಲ್ಲ. ಮತ್ತೆ ಈಗ ಸರ್ವೆ ಕಾರ್ಯಕ್ಕೆ ಬಂದಿದ್ದು, ನಮ್ಮ ಅಭ್ಯಂತರವಿಲ್ಲ. ಸರ್ವೆ ಕಾರ್ಯ ಮುಗಿದ ಬಳಿಕ ಮಾಹಿತಿಯನ್ನು ನಮಗೂ ನೀಡಬೇಕು’ ಎಂದರು. ಪ್ರತಿಕ್ರಿಯಿಸಿದ ತಿಪ್ಪೇಸ್ವಾಮಿ ಮತ್ತು ತಹಸೀಲ್ದಾರ್ ಆರ್.ಎಚ್. ಭಾಗವಾನ್, ‘ತೆರವುಗೊಳಿಸಿರುವುದರ ಬಗ್ಗೆ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಲಾಗಿದೆ. ಇಲ್ಲಿನ ಸರ್ವೆ ಕಾರ್ಯದ ಬಗ್ಗೆಯೂ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ನಿಮ್ಮ ವಕೀಲರಿಂದ ಮಾಹಿತಿಯನ್ನು ಪಡೆದುಕೊಳ್ಳಬಹುದು’ ಎಂದರು.
ಭೂ ದಾಖಲೆಗಳ ಇಲಾಖೆ ಉಪನಿರ್ದೇಶಕಿ ನಜ್ಮ ಫಿರಜಾದೆ, ಡಿವೈಎಸ್ಪಿ ಟಿ.ವಿ. ಸುರೇಶ, ಸಿಪಿಐ ಮಂಜುನಾಥ ಪಂಡಿತ್, ಪಿಎಸ್ಐ ಯು.ಜೆ. ಶಶಿಕುಮಾರ, ಸರ್ವೆ, ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.