ಶಿರಸಿ: ತಾಲೂಕಿನ ಬನವಾಸಿಯ ಹಕ್ಕಲ ಮಾರಿಕಾಂಬೆಯು ಸಹೋದರಿಯರೊಡಗೂಡಿ ಭಕ್ತರ ಜೈಕಾರ, ವಾದ್ಯ ಮೇಳಗಳು, ಪೂಜಾ ಕುಣಿತದ ಸೊಬಗಿನೊಂದಿಗೆ ಬಂದು ಬುಧವಾರ ಜಾತ್ರಾ ಗದ್ದುಗೆಯಲ್ಲಿ ಆಸೀನಳಾದಳು.
ಸಿಂಹವಾಹಿನಿ ಮಾರಿಕಾಂಬೆ, ಆಕೆಯ ಎಡ-ಬಲ ಮಗ್ಗುಲಲ್ಲಿ ದುರ್ಗಾದೇವಿ ಹಾಗೂ ಮಹಾಲಕ್ಷ್ಮಿಯರು ಅಲಂಕೃತ ಬಂಡಿಯಲ್ಲಿ ಕುಳಿತು ಮೆರವಣಿಗೆಯಲ್ಲಿ ಸಾಗಿಬರುವ ದೃಶ್ಯವನ್ನು ಸಹಸ್ರಾರು ಜನರು ಕಣ್ತುಂಬಿಕೊಂಡರು. ಜಾತ್ರಾ ಸಮಿತಿಯವರು ಬಿಡಕಿಬೈಲಿನಲ್ಲಿ ಗದ್ದುಗೆಯನ್ನು ಸುಂದರವಾಗಿ ನಿರ್ವಿುಸಿದ್ದಾರೆ. ಈ ಗದ್ದುಗೆಯಲ್ಲಿ ಮಧ್ಯಾಹ್ನ 12 ಗಂಟೆಗೆ ಕಲ್ಯಾಣಯರಾಗಿ ಬಂದ ದೇವಿಯರನ್ನು ಪ್ರತಿಷ್ಠಾಪಿಸಲಾಯಿತು. ಫೆ.27ರಿಂದ ಮಾ.3 ರವರೆಗೆ ದೇವಿಗೆ ಹರಕೆ, ತುಲಾಭಾರ, ಪೂಜಾ ವಿನಿಯೋಗ, ಕೀರ್ತನೆ ಸೇವಾ ಕಾರ್ಯಕ್ರಮಗಳು ನಡೆಯಲಿವೆ. ಮಾ.4ರಂದು ದೇವಿಯ ವಿಸರ್ಜನೆ ನಡೆಯಲಿದೆ. ದೇವಾಲಯ ಸಮಿತಿ ಅಧ್ಯಕ್ಷ ರಾಮದಾಸ ಚೌಧರಿ, ಉಪಾಧ್ಯಕ್ಷ ವಸಂತ, ಕಾರ್ಯದರ್ಶಿ ಡಿ.ಎಂ.ಬಂಡೇರ, ಪಂಚಾಯಿತಿ ಅಧ್ಯಕ್ಷ ಗಣೇಶ ಸಣ್ಣಲಿಂಗಣ್ಣನವರ್, ಜಾತ್ರಾ ಸಮಿತಿ ಪ್ರಮುಖರು ಹಾಜರಿದ್ದರು.