More

    ಸ್ತ್ರೀ ಕುಲಕ್ಕೆ ಅಕ್ಕನ ವಚನಗಳು ದಾರಿದೀಪ

    ಬಸವಕಲ್ಯಾಣ: ವೈರಾಗ್ಯ ನಿಧಿ ಅಕ್ಕಮಹಾದೇವಿ ಜಗತ್ತಿನ ಮೊಟ್ಟಮೊದಲ ಸ್ತ್ರೀವಾದಿ. ಅವರ ವಚನಗಳು ಸ್ತ್ರೀ ಕುಲಕ್ಕೆ ದಾರಿದೀಪವಾಗಿವೆ ಎಂದು ಮುಂಡರಗಿ ಮತ್ತು ಬೈಲೂರಿನ ತೋಂಟದಾರ್ಯ ಮಠದ ಶ್ರೀ ನಿಜಗುಣಾನಂದ ಮಹಾಸ್ವಾಮೀಜಿ ಹೇಳಿದರು.

    ವೀರವೈರಾಗ್ಯ ನಿಧಿ ಅಕ್ಕಮಹಾದೇವಿ ಜಯಂತಿ ನಿಮಿತ್ತ ಬಂದವರ ಓಣಿ ಗವಿಯಲ್ಲಿ ಅಕ್ಕಮಹಾದೇವಿ ಅನುಭಾವ ಪೀಠ ಹಾಗೂ ಬಸವಕಲ್ಯಾಣ ಕ್ಷೇತ್ರ ಸಮಿತಿಯಿಂದ ಮಂಗಳವಾರ ಆಯೋಜಿಸಿದ್ದ ಮಹಿಳಾ ಸಮ್ಮೇಳನ ಉದ್ಘಾಟಿಸಿದ ಅವರು, ಮಹಿಳೆಯರಿಗೆ ಎಲ್ಲ ರೀತಿಯ ಸ್ವಾತಂತ್ರ್ಯ ನೀಡಿದ್ದು ಶರಣ ಧರ್ಮ ಎಂದರು.

    ಮಹಿಳೆ ಭೋಗದ ವಸ್ತುವಲ್ಲ, ಅವಳಲ್ಲಿ ಅದ್ಬುತ ಶಕ್ತಿಯಿದೆ. ನಮ್ಮದು ಶರಣ ಧರ್ಮ. ಎಲ್ಲರೂ ಸುಖ ಸಂಪತ್ತು ಅರಸುತ್ತ ಹೋಗುತ್ತೇವೆ. ಆದರೆ ಇದನ್ನು ಧಿಕ್ಕರಿಸಿದ ವೈರಾಗ್ಯದ ತವನಿಧಿ ಅಕ್ಕಮಹಾದೇವಿ ಅವರು ಆಧ್ಯಾತ್ನದ ಕಡೆ ಬಂದರು. ದೇವರು, ಧರ್ಮ, ಹೆಣ್ಣು-ಗಂಡು, ಪ್ರಕೃತಿ, ನಾನು ಮತ್ತು ಜೀವನದ ಸ್ಪಷ್ಟೀಕರಣ ನೀಡಿದವರು ಅಕ್ಕ. ಮಹಿಳೆಯರು ಮೂಢನಂಬಿಕೆಯಿಂದ ಹೊರಬಂದು ಬದಲಾದರೆ ಸಮಾಜ ಬದಲಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಅಕ್ಕಮಹಾದೇವಿ ಪ್ರಶಸ್ತಿ ಪುರಸ್ಕೃತೆ ಡಾ.ಮೀನಾಕ್ಷಿ ಬಾಳಿ ಅನುಭಾವ ನೀಡಿ, ಮಹಿಳೆಯರು ಪರುಷರಿಗಿಂತ ಕಡಿಮೆಯಲ್ಲ. ಸಮಾನರು ಎಂದು ಹೇಳಿದ್ದು ಲಿಂಗಾಯತ ಧರ್ಮ. ಅಕ್ಕನ ವಚನಗಳು ಅನುಭಾವ ಮತ್ತು ಅನುಭವಕ್ಕೆ ಪರಿಣಾಮ ಬೀರುವಂಥವು ಎಂದರು.

    ಅಧ್ಯಕ್ಷತೆ ವಹಿಸಿದ್ದ ಬಿಡಿಪಿಸಿ ನಿರ್ದೇಶಕಿ ಪ್ರೊ.ವಿಜಯಲಕ್ಷ್ಮೀ ಗಡ್ಡೆ ಮಾತನಾಡಿ, ೧೨ನೇ ಶತಮಾನದಲ್ಲಿ ಮಹಿಳೆಯರು ಮನೆ ಹೊರಗಡೆ ಬರುವಂಥ ಸ್ಥಿತಿ ಇರಲಿಲ್ಲ. ಅಂತಹ ಸಮಯದಲ್ಲಿ ಸ್ತ್ರೀ-ಪುರುಷರು ಸಮಾನರು ಎಂದು ಹೇಳಿಕೊಟ್ಟಿದ್ದೇ ಶರಣ ಧರ್ಮ. ಮುಂದಿನ ದಿನಗಳಲ್ಲಿ ಗವಿಯಲ್ಲಿ ಅಕ್ಕಮಹಾದೇವಿ ಮೂರ್ತಿ ಕೂಡಿಸುವುದಾಗಿ ಹೇಳಿದರು.

    ಸಾನ್ನಿಧ್ಯ ವಹಿಸಿದ್ದ ವಿಶ್ವ ಬಸವಧರ್ಮ ಟ್ರಸ್ಟ್ ಅನುಭವ ಮಂಟಪ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಆಶೀರ್ವಚನ ನೀಡಿದರು. ಅಕ್ಕಮಹಾದೇವಿ ಗವಿಯ ಪೂಜ್ಯ ಸತ್ಯಕ್ಕತಾಯಿ ಪ್ರಾಸ್ತಾವಿಕ ಮಾತನಾಡಿದರು. ಪೂಜ್ಯ ಸುಗುಣಾತಾಯಿ, ಅಕ್ಕನ ಬಳಗದ ಅಧ್ಯಕ್ಷೆ ಸುಲೋಚನಾ ಮಾಮಾ, ರಂಜನಾದುರ್ಗೆ ಇತರರಿದ್ದರು.

    ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ಉಷಾ ಮಿರ್ಚೆ ಧ್ವಜಾರೋಹಣ ನೆರವೇರಿಸಿದರು. ಡಾ.ಸಂಗೀತಾ ಮಂಠಾಳೆ ಸ್ವಾಗತಿಸಿದರು. ಜಯಶ್ರೀ ಬಿರಾದಾರ ನಿರೂಪಣೆ ಮಾಡಿದರು. ರಂಜನಾ ಭೂಶೆಟ್ಟಿ ಮತ್ತು ಸಂಗಡಿಗರು ವಚನ ಸಂಗೀತ ಹಾಗೂ ಕವಿತಾ ಸಜ್ಜನ ವಚನ ಪಠಣ ನಡೆಸಿಕೊಟ್ಟರು. ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಸಾನ್ನಿಧ್ಯ ಮತ್ತು ಪೂಜ್ಯ ಗಾಯತ್ರಿ ತಾಯಿ ನೇತೃತ್ವದಲ್ಲಿ ೮ರಿಂದ ೧೮ ವರ್ಷದೊಳಗಿನ ಮಕ್ಕಳಿಗೆ ಸಾಮೂಹಿಕ ಇಷ್ಟಲಿಂಗ ಯೋಗ ನಡೆಯಿತು.

    ಅಕ್ಕಮಹಾದೇವಿ ವಚನಗಳನ್ನು ಓದಿ ಅರ್ಥೈಸಿಕೊಳ್ಳಬೇಕು. ಸ್ತುತಿ-ನಿಂದೆಗಳು ಬಂದೆಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿ ಮತ್ತು ಸಂತೋಷವಾಗಿರಬೇಕು. ನಿಜವನರಿದು ನಿಶ್ಚಿಂತವಾಗಿರಬೇಕು. ಅಕ್ಕನ ವಚನಗಳನ್ನು ಓದಿ ಜೀವನದಲ್ಲಿ ಎಷ್ಟರ ಮಟ್ಟಿಗೆ ಅಳವಡಿಸಿಕೊಂಡಿದ್ದೇವೆ ಎಂದು ಆತ್ಮವಲೋಕನ ಮಾಡಿಕೊಂಡಾಗಲೇ ನಿಜವಾದ ಬದುಕಿನ ಅರ್ಥ ತಿಳಿಯಲಿದೆ.
    | ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಅಧ್ಯಕ್ಷರು, ಅನುಭವ ಮಂಟಪ ಟ್ರಸ್ಟ್

    ಭವ್ಯ ಮೆರವಣಿಗೆ: ಬಂದವರ ಓಣಿ ಮುಖ್ಯದ್ವಾರದಿಂದ ಅಕ್ಕಮಹಾದೇವಿ ಗವಿವರೆಗೆ ಅಕ್ಕಮಹಾದೇವಿ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಪೂಜ್ಯರ ಸಾನ್ನಿಧ್ಯದಲ್ಲಿ ಶಾಮಾ ರಗಟೆ ಹಾಗೂ ಬಸವರಾಜೇಶ್ವರಿ ನಾಗರಾಳೆ ಮೆರವಣಿಗೆಗೆ ಚಾಲನೆ ನೀಡಿದರು. ರಾಜೇಶ್ವರಿ ಖೂಬಾ, ಮಹಾದೇವಿ ಹಲಶೆಟ್ಟಿ, ಸೋನಾಲಿ ನೀಲಕಂಠೆ, ಸರಸ್ವತಿ ಬಿರಾದಾರ, ಕವಿತಾ ಮೂಲಗೆ, ಮೀನಾ ಜಾಧವ್, ರಾಣಿ ವಡ್ಡೆ, ರಾಣಿ ಜಗತಾಪ ಇತರರು ಪಾಲ್ಗೊಂಡಿದ್ದರು. ನಂತರ ತೊಟ್ಟಿಲೋತ್ಸವ ಜರುಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts