ವಿಜಯವಾಣಿ ಸುದ್ದಿಜಾಲ ಕೋಲಾರ
ಸಾಲ ಕೇಳಿದ್ದೇ ತಪ್ಪಾಯಿತು ಎಂಬಂತೆ ಸಾಲ ನೀಡಿದಾತನೊಂದಿಗೆ ಜಗಳ ಕಾಯ್ದ ವ್ಯಕ್ತಿ ಮಚ್ಚಿನ ಏಟಿಗೆ ಪ್ರಾಣ ಕಳೆದುಕೊಂಡು ಮಸಣ ಸೇರಿದ್ದಾನೆ.
ಈ ಘಟನೆ ಮಾಲೂರು ಪಟ್ಟಣದಲ್ಲಿ ನಡೆದಿದ್ದು, ಆದರ್ಶ ನಗರದ ವಾಸಿ ಚೈನ್ಬಾಬು(30) ಕೊಲೆಯಾದವರು.
ಪಟ್ಟಣದ ಬಾಬುರಾವ್ ರಸ್ತೆಯ ಜಿಮ್ ಶಶಿ 50,000 ರೂ,.ಗಳನ್ನು ಬಾಬು ಎಂಬಾತನಿಗೆ ಕಳೆದ ವರ್ಷ ಸಾಲ ನೀಡಿದ್ದ. ಸಾಲ ವಾಪಸ್ ಮಾಡುವಂತೆ ಬಾಬು ಬಳಿ ಅನೇಕ ಬಾರಿ ಕೇಳಿದ್ದ. ವರ್ಷ ಕಳೆದರೂ ಬಾಬು ಸಾಲ ಮರುಪಾವತಿ ಮಾಡುವ ಲಕ್ಷಣ ಕಂಡುಬರಲಿಲ್ಲ. ಹಾಗಾಗಿ ಶುಕ್ರವಾರ ರಾತ್ರಿ 10 ಗಂಟೆಗೆ ಬಾಬು ಅವರಿಗೆ ದೂರವಾಣಿ ಕರೆ ಮಾಡಿದ ಶಶಿ ಕೋಲಾರ ರಸ್ತೆಯಲ್ಲಿರುವ ಬಜಾಜ್ ಶೋರೂಂ ಹಿಂಭಾಗದ ಚಂದ್ರಪ್ಪ ಎಂಬುವರ ಖಾಲಿ ಜಾಗಕ್ಕೆ ಕರೆಯಿಸಿಕೊಂಡಿದ್ದಾನೆ.
ಈ ವೇಳೆ ಪರಸ್ಪರ ಮಾತಿನ ಚಕಮಕಿ ನಡೆದಿದ್ದು, ತಾಳ್ಮೆ ಕಳೆದುಕೊಂಡ ಶಶಿ ಮಚ್ಚಿನಿಂದ ಬಾಬುವಿಗೆ ಹಲ್ಲೆ ಮಾಡಿದ್ದರಿಂದ ತೀವ್ರ ಗಾಯಗೊಂಡು ಮೃತಪಟ್ಟಿದ್ದಾನೆ. ಘಟನೆಯಿಂದ ಗಾಬರಿಗೊಂಡ ಶಶಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ. ಘಟನೆ ಸಂಬಂಧ ಬಾಬು ಅವರ ತಂದೆ ಸರ್ದಾರ್ ಸಾಬ್ ಪಟ್ಟಣದ ಪೋಲಿಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ಕಾರ್ತೀಕ್ರೆಡ್ಡಿ, ಸಿಪಿಐ ಮಾರ್ಕೊಂಡಪ್ಪ, ಪಿಎಸ್ಐ ಅನಿಲ್ಕುಮಾರ್ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.