ಚಿಕ್ಕೋಡಿ ಗ್ರಾಮೀಣ, ಬೆಳಗಾವಿ: ದೇಶದ ಆರ್ಥಿಕತೆಗೆ ಪೂರಕವಾಗಿರುವ ಸಹಕಾರ ಕ್ಷೇತ್ರದ ಸಾಧನೆಗಳನ್ನು ಸಾರ್ವಜನಿಕರ ಗಮನಕ್ಕೆ ತರುವುದು ಮುಖ್ಯ ಎಂದು ಬೀರೇಶ್ವರ ಸಂಸ್ಥೆಯ ಅಧ್ಯಕ್ಷ ಜಯಾನಂದ ಜಾಧವ ಹೇಳಿದರು.
ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಜೊಲ್ಲೆ ಗ್ರೂಪ್ನ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಮಲ್ಟಿಸ್ಟೇಟ್ ಸಹಕಾರಿಯ ಮುಖ್ಯ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ 69ನೇ ಸಹಕಾರ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಜನ ಸಾಮಾನ್ಯರಿಗೆ ಸಹಕಾರ ತತ್ರ್ವಗಳನ್ನು ತಲುಪುವಂತೆ ಮಾಡಬೇಕಿದೆ. ಅವರಿಗೆ ಸಹಕಾರ ಕ್ಷೇತ್ರದ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಿ, ಸಹಕಾರಿ ಕ್ಷೇತ್ರವನ್ನು ಬಲಪಡಿಸುವುದು ನಮ್ಮ ಉದ್ದೇಶವಾಗಿದೆ ಎಂದರು.
ಆಶಾ ಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ಶಾಲೆಯ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ ಸಹಕಾರ ಧ್ವಜಾರೋಹಣ ನೆರೆವೇರಿಸಿದರು. ಸಂಸ್ಥೆ ಅಧ್ಯಕ್ಷ ಚಂದ್ರಕಾಂತ ಖೋತ, ಒಜಿಸಿಎಸ್ ಅಧ್ಯಕ್ಷ ಲಕ್ಷ್ಮಣ ಕಬಾಡೆ, ಅನ್ವರ್ ದಾಡೇವಾಲೆ, ಯಾಸೀನ್ ತಾಂಬೋಳಿ, ಆರ್.ಸಿ.ಚೌಗಲಾ, ಆರ್.ಜಿ.ಕುಂಬಾರ, ಬಿ.ಎ.ಗುರವ ಇತರರಿದ್ದರು.