ಚಿಕ್ಕಮಗಳೂರು: ಮಹಿಳೆಯರು ಆರ್ಥಿಕ, ಸಾಮಾಜಿಕವಾಗಿ ಸಬಲರಾಗಬೇಕು. ಅವರ ಭದ್ರತೆಗಾಗಿ ಸರ್ಕಾರ, ಜನಪ್ರತಿನಿಧಿಗಳು ಕೆಲಸ ಮಾಡಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಏರ್ಪಡಿಸಿದ್ದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ಕ್ರಾಸ್, ರೋವರ್ಸ್ ಘಟಕಗಳ ಉದ್ಘಾಟನೆ ನೆರವೇರಿಸಿ ಮಾತನಾಡಿ, ವಿದ್ಯಾರ್ಥಿನಿಯರಿಗೆ ಮಾಜಿ ಪ್ರಧಾನಿ ಇಂದಿರಾಗಾಂಧಿ, ಮದರ್ ತೆರೆಸ್ಸಾ, ಮೊದಲ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅಂಥವರು ಮಾದರಿಯಾಗಬೇಕು ಎಂದರು.
ಡಾ. ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಬೇರೆ ಯಾರೂ ರಚಿಸಲು ಸಾಧ್ಯವಿಲ್ಲ. ಸಂವಿಧಾನದ ಆಶಯ ಕೇವಲ ಸಮಾನತೆಗಾಗಿ ಆಗಿರದೆ ಮಹಿಳೆಯರಿಗೆ ಮತದಾನದ ಹಕ್ಕು ನೀಡಿರುವುದು ಹೆಮ್ಮೆ ಸಂಗತಿ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅವರು ಕಾಲೇಜು ವಾರ್ಷಿಕ ಸಂಚಿಕೆ ಗಿರಿಮಂದಾರ ಬಿಡುಗಡೆ ಮಾಡಿ ಮಾತನಾಡಿ, ದೇಶದಲ್ಲಿ ಶಿಕ್ಷಕರ ಕೊರತೆ ಇದೆ. ಶಿಕ್ಷಕರು, ಪ್ರಾಧ್ಯಾಪಕರ ಕೊರತೆಯನ್ನು ಸರ್ಕಾರ ನೀಗಿಸಿದಾಗ ಮಾತ್ರ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯ. ಆದ್ದರಿಂದ ಶಿಕ್ಷಕರಾಗುವಂತೆ ಕಿವಿಮಾತು ಹೇಳಿದರು.
ಪ್ರೊ. ಎಂ.ಎಸ್.ನಟೇಶ್, ಪ್ರೊ. ಮಹೇಶ್ವರಪ್ಪ, ಡಾ. ಲೋಕೇಶ್ ನಾಯ್ಕ, ಪ್ರೊ. ದೀಕ್ಷಿತ್ಕುಮಾರ್, ದೇವರಾಜ್, ಪ್ರೊ. ಲೋಕೇಶ್ಗೌಡ ಇತರರಿದ್ದರು.