ಹಾಸನ : ಅಂಬಿಗರ ಚೌಡಯ್ಯ ಮತ್ತು ಮಹಾಯೋಗಿ ವೇಮನ ಮಹರ್ಷಿಗಳು ಸಮಾಜದಲ್ಲಿನ ಪಿಡುಗುಗಳ ವಿರುದ್ಧ ಧ್ವನಿಯಾಗಿ ಎಲ್ಲರಿಗೂ ದಾರಿದೀಪವಾಗಿ ಬದುಕಿದವರು ಎಂದು ತಾಲೂಕು ತಹಸೀಲ್ದಾರ್ ಕೆ.ಸಿ ಸೌಮ್ಯ ತಿಳಿಸಿದರು.
ಆಲೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಅಂಬಿಗರ ಚೌಡಯ್ಯ ಮತ್ತು ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಬ್ಬರು ಮಹನೀಯರು ಹಿಂದಿನ ಕಾಲದಿಂದಲೂ ಸಮಾನತೆಯ ಪರವಾಗಿ ಅನೇಕ ಕಾರ್ಯಗಳನ್ನು ಮಾಡಿದವರು. ಸಾಮಾಜಿಕ ಕಳಕಳಿಯುಳ್ಳ ಸಾಹಿತ್ಯಗಳನ್ನು ರಚಿಸುವುದರ ಮೂಲಕ ಜನಜಾಗೃತಿ ಮೂಡಿಸಿದವರು ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರೇಶ್ ಮಾತನಾಡಿ, ಅಂಬಿಗರ ಚೌಡಯ್ಯ ಇತರ ಸಾಹಿತ್ಯ ವಚನಕಾರರಿಗಿಂತ ಭಿನ್ನವಾಗಿದ್ದು, ನೇರವಾದ ಮಾತುಗಳ ಮೂಲಕ ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸಿದಂತಹ ಇವರ ವಿಚಾರಗಳು ನಿಜಕ್ಕೂ ಶ್ಲಾಘನೀಯ. ವೇಮನ ಕೂಡ ತಮ್ಮ ಸಾಹಿತ್ಯದಿಂದ ಸಾಮಾನ್ಯರಿಗೆ ಅರಿವು ಮೂಡಿಸಿದರು ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಗೋಪಾಲಕೃಷ್ಣ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಪಾ.ಹೈ ಗುಲಾಂ ಸತ್ತಾರ್, ಶಿರಸ್ತೇದಾರ್ ವೆಂಕಟೇಶ್ ಹಾಗೂ ಸಮಾಜದ ಹಿರಿಯ ಮುಖಂಡರು ಭಾಗವಹಿಸಿದ್ದರು.