ಮಂಗಳೂರು: ಸಮಾಜದ ಸ್ವಾಸ್ಥ್ಯವನ್ನು ಉಳಿಸುವಲ್ಲಿ ಸಾಹಿತಿ, ಲೇಖಕರ ಪಾತ್ರ ಹಿರಿದು ಎಂದು ಕರಾವಳಿ ಕಾಲೇಜು ಸಮೂಹ ಅಧ್ಯಕ್ಷ ಎಸ್.ಗಣೇಶ್ ರಾವ್ ಹೇಳಿದರು.
ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದ.ಕ. ಆಶ್ರಯದಲ್ಲಿ ‘ನಾಡು ನುಡಿ ಸಾಹಿತ್ಯ ಸಮ್ಮೇಳನ’ ಕಾವ್ಯ ದಶಾವತಾರ-ಕವಿ ಕಾವ್ಯ ಸನ್ಮಾನ, ಸಾಧನಾ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉರ್ವಸ್ಟೋರ್ನ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಸಾಧಕರೆಲ್ಲ ಶೂನ್ಯದಿಂದ ಬಂದವರು. ಸದುದ್ದೇಶ, ಧನಾತ್ಮಕ ಚಿಂತನೆಯಿಂದ ಮಾಡುವ ಕಾರ್ಯ ಸಫಲವಾಗುತ್ತದೆ. ನಿಧಾನವಾಗಿ, ಹಂತ ಹಂತವಾಗಿ ಬಂದೊದಗುವ ಯಶಸ್ಸು ಶಾಶ್ವತ. ನಮ್ಮ ಸಾಧನೆಗೆ ನಾವೇ ಮುನ್ನುಡಿ ಬರೆಯಬೇಕು. ಸಾಧನೆ ಬಳಿಕ ಇತರರನ್ನು ಬೆಳೆಸುವ ಮನಸ್ಥಿತಿ ಇರಬೇಕೇ ಹೊರತು ತುಳಿಯಬಾರದು ಎಂದರು.
ವ್ಯಕ್ತಿಯ ಮನಸ್ಥಿತಿ ಸಮಾಜದ ಕನ್ನಡಿ. ಮಾತು, ನುಡಿ, ಬರೆಹಗಳು ಸಮಾಜಮುಖಿಯಾಗಿರಬೇಕು. ದೇಶ, ಭಾಷೆ, ಮಹಿಳೆಯರನ್ನು ಗೌರವಿಸುವುದು ಪ್ರಜೆಗಳ ಕರ್ತವ್ಯ ಎಂದರು.
ಹಣ್ಣಿರುವ ಮರಕ್ಕೆ ಮಾತ್ರ ಕಲ್ಲೆಸೆಯುತ್ತಾರೆ. ಅದರಿಂದ ವಿಚಲಿತಗೊಳ್ಳಬಾರದು. ಸಾಧನೆ ಹಣ, ಅಧಿಕಾರಕ್ಕೆ ಸೀಮಿತವಾಗದೆ ಪ್ರೀತಿ, ವಿಶ್ವಾಸ, ಜ್ಞಾನ ಗಳಿಕೆಗೆ ಪೂರಕವಾಗಬೇಕು. ನಮ್ಮನ್ನು ನಾವು ಅರ್ಥೈಸಿಕೊಂಡು, ಇದ್ದುದರಲ್ಲಿ ತೃಪ್ತಿ ಪಡೆದು ಬದುಕಿನ ಇಂಚಿಂಚನ್ನೂ ಅನುಭವಿಸಬೇಕು ಎಂದರು.
ಸಾಹಿತಿ, ಸಂಘಟಕ ಭಾಸ್ಕರ ರೈ ಕುಕ್ಕುವಳ್ಳಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ, ಕವಿ ವಸಂತಕುಮಾರ ಪೆರ್ಲ, ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ಘಟಕ ಅಧ್ಯಕ್ಷ ಡಾ.ಮಂಜುನಾಥ್ ರೇವಣ್ಕರ್, ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯೆ ತಾರಾ ಆಚಾರ್ಯ, ನಾಟಕಕಾರ, ವಕೀಲ ಶಶಿರಾಜ್ ಕಾವೂರು, ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನ ಸಂಚಾಲಕಿ ಲತಾ ಕೃಷ್ಣದಾಸ್ ಉಪಸ್ಥಿತರಿದ್ದರು.
ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಕಾ.ವೀ ಕೃಷ್ಣದಾಸ್ ಪ್ರಸ್ತಾವಿಸಿದರು.
ಕಾವ್ಯ ದಶಾವತಾರ ಸಂಯೋಜಕಿ ಗೀತಾ ಲಕ್ಷ್ಮೀಶ್ ವಂದಿಸಿದರು. ವಿಜಯಲಕ್ಷ್ಮೀ ಕಟೀಲು, ಅರ್ಪಿತಾ ಶೆಟ್ಟಿ ನಿರೂಪಿಸಿದರು.
ಈ ಸಂದರ್ಭ ಅಖಿಲ ಭಾರತ ಕವಿಗಳು ಮತ್ತು ಲೇಖಕರ ಕ್ಷೇಮಾಭಿವೃದ್ಧಿ ಒಕ್ಕೂಟ(AIPAWU) ಉದ್ಘಾಟಿಸಿ ಲಾಂಛನ ಅನಾವರಣಗೊಳಿಸಲಾಯಿತು. ಸತ್ಯವತಿ ಕೊಳಚಪ್ಪು ಅವರ ‘ಮುತ್ತು ಅಮ್ಮನ ಕೈತುತ್ತು’ ಕವನ ಸಂಕಲನ ಬಿಡುಗಡೆಗೊಳಿಸಲಾಯಿತು. ಕಾವ್ಯ ದಶಾವತಾರ- ಕವಿ ಕಾವ್ಯ ಸನ್ಮಾನ ಸಾಧನಾ ರಾಜ್ಯ ಪ್ರಶಸ್ತಿ, ಕಥಾಯಜ್ಞ ರಾಷ್ಟ್ರೀಯ ಕಥಾ ಪುರಸ್ಕಾರ ಮತ್ತು ಹಂಸಕಾವ್ಯ ರಾಷ್ಟ್ರೀಯ ಕಾವ್ಯ ಪುರಸ್ಕಾರ ಪ್ರದಾನಿಸಲಾಯಿತು. ಜಗದೀಶ್ ಶಿವಪುರ ಅವರಿಂದ ದಶಾವತಾರ ಗೀತೆಗಳು, ಲಕ್ಷ್ಮೀನಾರಾಯಣ ಅವರಿಂದ ಕಲಾಕುಂಚ, ರಿಶಿಕಾ ಕುಂದೇಶ್ವರ ಅವರಿಂದ ಗಾನರಂಜನೆ ನಡೆಯಿತು.