ಚಿಕ್ಕಮಗಳೂರು: ಯುವ ಇಂಜಿಯರ್ಗಳು ಸರ್ ಎಂ.ವಿಶ್ವೇಶ್ವರಯ್ಯ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಜನಸಾಮಾನ್ಯರಿಗೆ ಉಪಯುಕ್ತವಾಗುವಂತ ಯೋಜನೆಗಳನ್ನು ಕೊಡುಗೆ ನೀಡಿದಾಗ ವೃತ್ತಿ ಬದುಕಿನಲ್ಲಿ ಸಾರ್ಥಕತೆ ಕಾಣಬಹುದು ಎಂದು ಪಿಡಬ್ಲ್ಯುಡಿ ಕಾರ್ಯಪಾಲಕ ಅಭಿಯಂತ ಡಿ.ಎನ್.ಶ್ರೀಧರ ಹೇಳಿದರು.
ನಗರದ ಲೋಕೋಪಯೋಗಿ ಇಲಾಖೆ ಕಚೇರಿ ಆವರಣದಲ್ಲಿ ಪಿಡಬ್ಲ್ಯುಡಿ, ಪಂಚಾಯತ್ರಾಜ್ ಇಂಜಿನಿಯರಿಂಗ್, ಗ್ರಾಮೀಣ ಕುಡಿಯುವ ನೀರು ಯೋಜನೆ ವಿಭಾಗದಿಂದ ಸರ್ಕಾರಿ ಇಂಜಿನಿಯರ್ಗಳು ಗುರುವಾರ ಹಮ್ಮಿಕೊಂಡಿದ್ದ ಇಂಜಿನಿಯರ್ಸ್ ಡೇ ಸಮಾರಂಭದಲ್ಲಿ ಸರ್ ಎಂ.ವಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಸರ್ ಎಂ.ವಿ ಹಾಕಿಕೊಟ್ಟ ಮಾರ್ಗದಲ್ಲಿ ಇಂಜಿನಿಯರ್ಗಳು ಸಾಗಿದಾಗ ಊರಿನ ಅಭಿವೃದ್ಧಿ ಸಾಧ್ಯ. ಮಾಡುವ ಕೆಲಸದಲ್ಲಿ ದಕ್ಷತೆ, ಪರಿಶ್ರಮ, ಸೇವಾ ಮನೋಭಾವನೆ ಮೈಗೂಡಿಸಿಕೊಂಡು ಶಾಶ್ವತ ಯೋಜನೆ ರೂಪಿಸಬೇಕು. ಸಮಾಜಮುಖಿ ಚಿಂತನೆಯೊಂದಿಗೆ ಕೆಲಸ ಮಾಡಿದರೆ ನಾಡಿನ ಅಭಿವೃದ್ಧಿ ಜತೆಗೆ ಜನಮನದಲ್ಲಿ ಅಚ್ಚಳಿಯದೆ ಉಳಿಯುತ್ತಾರೆ ಎಂಬುದಕ್ಕೆ ಸರ್ ಎಂ.ವಿ ಉದಾಹರಣೆ. ದೀಪದ ಬೆಳಕಿನಲ್ಲಿ ಓದಿ ಸಾಧನೆ ಮಾಡಿ ಜಗತ್ತನ್ನು ಬೆಳಗಿದ ಮಹಾನ್ ಪುರುಷ ಎಂದು ಬಣ್ಣಿಸಿದರು.