ತುಮಕೂರು: ಈ ಹಿಂದಿನ ಮಳೆಗಾಲದಲ್ಲಿನ ಅವಾಂತರದಿಂದ ಎಚ್ಚೆತ್ತುಕೊಂಡಿರುವ ಮಹಾನಗರ ಪಾಲಿಕೆ ರಾಜಕಾಲುವೆ, ಮಳೆನೀರು ಹರಿಯುವ ಚರಂಡಿಗಳ ಸ್ವಚ್ಛತೆ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಂಡಿದೆ.
ಕಳೆದ ವರ್ಷ ಭಾರಿ ಮಳೆ ಸೃಷ್ಟಿಸಿದ ಗಂಡಾಂತರದಿಂದ ಎಚ್ಚೆತ್ತುಕೊಂಡಿರುವ ಪಾಲಿಕೆಯು ಕಳೆದ 3 ವಾರದಿಂದ ನಗರದ ಚರಂಡಿಗಳು ಹಾಗೂ ರಾಜಕಾಲುವೆಗಳನ್ನ ಸ್ವಚ್ಛಗೊಳಿಸಲು ಪಾಲಿಕೆ ಕಾಮಗಾರಿ ಕೈಗೆತ್ತಿಕೊಂಡಿದೆ. ಈ ಬಾರಿ ಮಳೆಯಿಂದ ತಗ್ಗುಪ್ರದೇಶಗಳ ಬಡಾವಣೆಗಳಿಗೆ ನೀರು ನುಗ್ಗದಂತೆ ರಾಜಕಾಲುವೆ, ದೊಡ್ಡ ಚರಂಡಿಗಳ ಹೂಳೆತ್ತುವ, ಕಸ, ಗಿಡಗಂಟಿಗಳ ಸ್ವಚ್ಛತಾ ಕಾರ್ಯವನ್ನು ಆಯುಕ್ತ ಎಚ್.ವಿ.ದರ್ಶನ್ ಮಾರ್ಗದರ್ಶನದಲ್ಲಿ ಮಾಡಲಾಗುತ್ತಿದೆ.
13 ಪ್ಯಾಕೇಜ್: ನಗರ ವ್ಯಾಪ್ತಿಯ ರಾಜಕಾಲುವೆ ಸ್ವಚ್ಛತೆಗೆ 13 ಪ್ಯಾಕೇಜ್ ವಿಂಗಡಿಸಿ ಟೆಂಡರ್ ಕರೆದಿದ್ದು , 35 ಕಿ.ಮೀ.ನಷ್ಟು ಸ್ವಚ್ಛತಾ ಕಾರ್ಯ ಭರದಿಂದ ಸಾಗಿದೆ. ಪೌರ ಕಾರ್ಮಿಕರನ್ನು ಸಣ್ಣ ಕಾಲುವೆಗಳ ಸ್ವಚ್ಛತೆಗೆ ಬಳಸಿಕೊಳ್ಳಲಾಗಿದ್ದು, ಒಟ್ಟು 55 ಕಿ.ಮೀ., ಹೂಳೆತ್ತುವ, ಸ್ವಚ್ಛತಾ ಕಾರ್ಯ ಮಾಡಲಾಗಿದೆ.
ಈ ಹಿಂದೆ ಮಳೆಯಿಂದ ಅನಾಹುತಕ್ಕೆ ಕಾರಣವಾಗಿದ್ದ ರಾಜಕಾಲುವೆಗಳ ಹೂಳೆತ್ತುವ ಮೂಲಕ ನೀರು ಸರಾಗವಾಗಿ ಹರಿಯಲು ಕ್ರಮಕೈಗೊಳ್ಳಲಾಗಿದೆ. ರಸ್ತೆಯ ಇಕ್ಕೆಲಗಳನ್ನೂ ಸ್ವಚ್ಛಗೊಳಿಸಲಾಗಿದೆ. ಆ ಮೂಲಕ ನಗರದ ಸ್ವಚ್ಛತೆಗೂ ಪಾಲಿಕೆ ಕ್ರಮವಹಿಸಿದೆ ಎಂದು ಪಾಲಿಕೆ ಆಯುಕ್ತ ಎಚ್.ವಿ.ದರ್ಶನ್ ‘ವಿಜಯವಾಣಿ’ಗೆ ಮಾಹಿತಿ ನೀಡಿದರು.
ಒಂದೂವರೆ ತಿಂಗಳಲ್ಲಿ ಒತ್ತುವರಿ ಸರ್ವೇ ವರದಿ: ತುಮಕೂರು ನಗರದಲ್ಲಿ ಬಹುತೇಕ ರಾಜಕಾಲುವೆಗಳು ಒತ್ತುವರಿ ಆಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದ್ದು ಒತ್ತುವರಿ ಸಮೀಕ್ಷೆ ಕಾರ್ಯ ಭರದಿಂದ ಸಾಗಿದೆ. ಇನ್ನೊಂದುವರೆ ತಿಂಗಳಲ್ಲಿ ರಾಜಕಾಲುವೆ ಸರ್ವೇ ವರದಿ ಬಂದ ಬಳಿಕ ರಾಜಕಾಲುವೆ ಒತ್ತುವರಿ ತೆರವು ಕೈಗೆತ್ತಿಕೊಳ್ಳಲಾಗುವುದು ಎಂದು ಆಯುಕ್ತ ಎಚ್.ವಿ.ದರ್ಶನ್ ತಿಳಿಸಿದರು.
ಅಂಡರ್ ಪಾಸ್ನಲ್ಲಿ ನೀರು ನಿಲ್ಲದಂತೆ ಕ್ರಮ: ಈ ಬಾರಿ ರೈಲ್ವೆ ಅಂಡರ್ ಪಾಸ್ಗಳಲ್ಲಿ ಮಳೆಗಾಲದಲ್ಲಿ ನೀರು ನಿಂತುಕೊಂಡು ವಾಹನ ಸಂಚಾರಕ್ಕೆ ತೀವ್ರ ತೊಂದರೆ ಆಗುತ್ತಿರುವುದನ್ನು ಗಮನಿಸಿದ್ದು, ಪಂಪು-ಮೋಟಾರ್ ಇಟ್ಟು ನೀರು ಖಾಲಿ ಮಾಡಲು ಕ್ರಮವಹಿಸಲಾಗುವುದು. ಅಲ್ಲದೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾರ್ಗದರ್ಶನದಲ್ಲಿ ರಚಿಸಿರುವ ಟಾಸ್ಕ್ ಫೋರ್ಸ್ ಅಂಡರ್ಪಾಸ್ಗಳಲ್ಲಿ ಮಳೆ ಬೀಳುವ ಸಂದರ್ಭದಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲು ಮುಂಜಾಗ್ರತ ಕ್ರಮವಹಿಸಲಿದೆ ಎಂದು ಪಾಲಿಕೆ ಆಯುಕ್ತ ಎಚ್.ವಿ.ದರ್ಶನ್ ತಿಳಿಸಿದರು.
ಶಿಕ್ಷಕರಿಗೆ ಸಚಿವರ ಸಲಹೆ: ತಂದೆ ತಾಯಿಗಳಿಗಿಂತಲೂ ಗುರುಗಳಿಗೆ ಹೆಚ್ಚು ಗೌರವ ನೀಡುವ ಮಕ್ಕಳ ಭವಿಷ್ಯದ ಜತೆ ಚೆಲ್ಲಾಟ ಆಡುವುದು ಬೇಡ. ಶಾಲೆ ಬಿಟ್ಟ ಮಕ್ಕಳ ಕಡೆ ಗಮನ ಹರಿಸಿ. ಕೆಲಸ ಮಾಡುವ ಸರ್ಕಾರಿ ಶಾಲೆಯಲ್ಲಿಯೇ ನಿಮ್ಮ ಮಕ್ಕಳನ್ನೂ ಸೇರಿಸಿದಲ್ಲಿ ಇತರ ಮಕ್ಕಳಿಗೂ ಆಸಕ್ತಿಯಿಂದ ಬೋಧನೆ ಮಾಡಲು ಸಾಧ್ಯ ಎಂದು ಸಚಿವ ರಾಜಣ್ಣ ಶಿಕ್ಷಕರಿಗೆ ಸಲಹೆ ನೀಡಿದರು.