ಬೆಳಗಾವಿ: ಮಕ್ಕಳು ಸದಾ ಹೊಸತು ಕಲಿಯಲು ಹಂಬಲಿಸುವ ಜತೆಗೆ ಹಿರಿಯ ಜೀವಿಗಳಿಂದ ಜೀವನ ಮೌಲ್ಯಗಳನ್ನು ಅರಿತು ಭಾರತದ ಭವ್ಯ ಪರಂಪರೆ ಹಾಗೂ ಸಂಸ್ಕೃತಿ ಮುಂದುವರಿಸಬೇಕು ಎಂದು ಪೃಥ್ವಿ ಕತ್ತಿ ಹೇಳಿದರು.
ಯಮಕನಮರಡಿಯ ಬಿ.ಬಿ.ಹಂಜಿ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ಸೋಮವಾರ ಏರ್ಪಡಿಸಿದ್ದ ಪದವಿ ದಿನ ಮತ್ತು ಅಜ್ಜ-ಅಜ್ಜಿಯರ ದಿನ ಆಚರಣೆಯಲ್ಲಿ ಮಾತನಾಡಿದ ಅವರು, ಅಜ್ಜ-ಅಜ್ಜಿಯರು ಕುಟುಂಬದ ಬೇರುಗಳಾಗಿದ್ದು, ಮಕ್ಕಳು ಜೀವನ ಪರ್ಯಂತ ಸಹಾಯ ಮಾಡುವ ಮೌಲ್ಯಗಳನ್ನು ಅಳವಡಿಸಿಕೊಳ್ಳಬಹುದು ಎಂದರು. ಪ್ರತಿಯೊಬ್ಬ ಅಜ್ಜ -ಅಜ್ಜಿಯರು ತಮ್ಮ ಮೊಮ್ಮಕ್ಕಳು ಬೆಳೆಯುತ್ತಿರುವುದನ್ನು ಮತ್ತು ಪ್ರಗತಿ ಸಾಧಿಸುವುದನ್ನು ನೋಡಲು ಇಷ್ಟಪಡುತ್ತಾರೆ. ಮತ್ತೊಂದೆಡೆ ಮೊಮ್ಮಕ್ಕಳಿಗೆ ಅಜ್ಜ-ಅಜ್ಜಿಯರು ಒಂದು ಸಂಪತ್ತು. ಆದ್ದರಿಂದ ಈ ನಿಧಿಯನ್ನು ಶ್ರೀಮಂತಗೊಳಿಸುವುದರ ಜತೆಗೆ ಜತನದಿಂದ ಕಾಪಾಡಿಕೊಳ್ಳಬೇಕು ಎಂದು ಹೇಳಿದರು. ಬಿ.ಬಿ.ಹಂಜಿ ಶಿಶುವಿಹಾರದ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ವಿದ್ಯಾವರ್ಧಕ ಸಂಘದ ನಿರ್ದೇಶಕ ಕುಶಾಲ ರಜಪೂತ, ಚೇತನ ಪತ್ತಾರ ಮತ್ತು ಅಜಿತ ಮಗದುಮ್ಮ, ಬಿ.ಬಿ.ಹಂಜಿ ಶಾಲೆಯ ಅಧ್ಯಕ್ಷ ಡಾ.ವಿಜಯ ಹಂಜಿ ಹಾಗೂ ಪ್ರಾಚಾರ್ಯೆ ಶೈಲಜಾ ಲಕ್ಷ್ಮೇಶ್ವರ ಇದ್ದರು.