ಹುಬ್ಬಳ್ಳಿ: ಉತ್ತರಾಧಿಕಾರಿ ನೇಮಕ ಕುರಿತ ಸತ್ಯಾಸತ್ಯತೆ ತಿಳಿಯಲು ಫೆ. 23ರಂದು ಮೂರುಸಾವಿರ ಮಠದ ಆವರಣಕ್ಕೆ ಬನ್ನಿ ಎಂದು ಬಾಲೇಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಅವರು ಸರ್ವರನ್ನೂ ಆಹ್ವಾನಿಸಿದರು.
ನಗರದ ನಾಗಶೆಟ್ಟಿಕೊಪ್ಪದ ಮಾರುತಿ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀ ಜಗದ್ಗುರು ಮೂರುಸಾವಿರ ಮಠದ ಸದ್ಭಕ್ತರ ಸಭೆಯಲ್ಲಿ ಅವರು ಮಾತನಾಡಿದರು.
ಸಭೆಯ ಚರ್ಚೆಯಲ್ಲಿ ಪಾಲ್ಗೊಂಡು ನಿಮಗೂ ಸಂಶಯಗಳಿದ್ದರೆ ಬಗೆಹರಿಸಿಕೊಳ್ಳಬೇಕು. ಮೂರುಸಾವಿರ ಮಠದ ಉತ್ತರಾಧಿಕಾರಿ ವಿಚಾರವನ್ನು ನಾನು ನಿರ್ವಿವಾದದಿಂದ ಬಗೆಹರಿಸಲು ಸಾಕಷ್ಟು ಪ್ರಯತ್ನ ಮಾಡಿದ್ದೇನೆ. ಬಹಳ ಜನರು ನಾನೇ ಹುದ್ದೆ ಅಪೇಕ್ಷಿಸಿದ್ದೇನೆ ಎಂದು ಭಾವಿಸಿದ್ದಾರೆ. ಇದು ನೂರಕ್ಕೆ ನೂರು ಸುಳ್ಳು. ನಾನಾಗಿ ಉತ್ತರಾಧಿಕಾರಿಯಾಗುವ ಕನಸು ಕಂಡವನಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ದಾಖಲೆಗಳು ಮತ್ತು ಇತರ ವಿಚಾರಗಳನ್ನು ಹೊತ್ತು ಶ್ರೀಮಠಕ್ಕೆ ಬರುತ್ತೇನೆ. ಸಂಬಂಧಪಟ್ಟ ಎಲ್ಲರೂ ಬರಲಿ. ಸತ್ಯ ಏನೆಂದು ನಾಡಿಗೆ ತಿಳಿಯಲಿ ಎಂದರು.
ವೀರಶೈವ ಲಿಂಗಾಯತ ಸಮಾಜದ ಮುಖಂಡ ಪ್ರಕಾಶ ಬೆಂಡಿಗೇರಿ ಮಾತನಾಡಿ, ದಿಂಗಾಲೇಶ್ವರ ಶ್ರೀಗಳ ಮೇಲೆ ವೃಥಾ ಆಪಾದನೆ ಮಾಡುವುದು ಸಲ್ಲ. ತಪ್ಪು ಮಾಡಿದ್ದರೆ ಅದನ್ನು ಸಾಬೀತುಪಡಿಸಲಿ. ಆಗ ಅವರನ್ನು ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡದಂತೆ ಅಲ್ಲಿಯೇ ನಿರ್ಧಾರ ತೆಗೆದುಕೊಳ್ಳೋಣ ಎಂದರು.
ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ಮಾತನಾಡಿ, 2014ರಲ್ಲಿ ದಿಂಗಾಲೇಶ್ವರ ಶ್ರೀಗಳನ್ನು ಉತ್ತರಾಧಿಕಾರಿಯನ್ನಾಗಿ ಮಾಡಿಕೊಂಡಿದ್ದೇವೆ ಎಂದು ಮೂರುಸಾವಿರ ಮಠದ ಶ್ರೀಗಳು ಹೇಳಿದ್ದರು. ಶ್ರೀಗಳು ತಮ್ಮ ಮಾತಿನಂತೆಯೇ ನಡೆದುಕೊಳ್ಳಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.
ಶ್ರೀಗಳು ಮತ್ತು ಜಿಲ್ಲೆಯ ಗಣ್ಯರು ಸಹಿ ಮಾಡಿದ್ದು ಮೊದಲು ನಮಗೆ ಗೊತ್ತಿರಲಿಲ್ಲ. ಈಗ ಗೊತ್ತಾಗಿದೆ. ಶ್ರೀ ದಿಂಗಾಲೇಶ್ವರ ಸ್ವಾಮೀಜಿಯನ್ನು ಉತ್ತರಾಧಿಕಾರಿಯನ್ನಾಗಿ ಈಗಿನ ಶ್ರೀಗಳು ನೇಮಿಸಲು ಕೋರಿ ಹೋರಾಟ ಮಾಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ, ನಾಗಶೆಟ್ಟಿಕೊಪ್ಪದ ಹಿರಿಯರು ಫೆ.23ರಂದು ಮಾರುತಿ ಮಂದಿರದಿಂದ ಹಾಗೂ ವೀರಾಪುರ ಓಣಿಯವರು ಮಹಾಬಲೇಶ್ವರ ದೇವಸ್ಥಾನದಿಂದ ಮೂರುಸಾವಿರ ಮಠದವರೆಗೆ ಮೆರವಣಿಗೆ ಮೂಲಕ ಬರಲು ನಿರ್ಧರಿಸಿದರು.
ಪ್ರಮುಖರಾದ ಡಿ.ಟಿ. ಪಾಟೀಲ, ಈರಣ್ಣ ಶಿಂತ್ರಿ, ಚಂದ್ರಶೇಖರ ಪಾಟೀಲ, ಪ್ರವೀಣ ಹುರುಳಿ, ಇತರರು ಇದ್ದರು.