ವಿಜಯಪುರ: ತೋಟಗಾರಿಕೆ ಇಲಾಖೆಯಲ್ಲಿ ಸರ್ಕಾರದ ಸಬ್ಸಿಡಿ ಹಣ ನೀಡಲು ಅಧಿಕಾರಿಗಳು ಕಮೀಷನ್ ಪಡೆಯುತ್ತಿದ್ದು ಕೂಡಲೇ ಅವರನ್ನು ಎತ್ತಂಗಡಿ ಮಾಡಲು ಆಗ್ರಹಿಸಿ ರೈತರು ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಆಗ್ರಹಿಸಿದರು.
ಬುಧವಾರ ಸಿಂದಗಿಯ ಸಾತವೀರೇಶ್ವರ ಸಭಾಭವನದಲ್ಲಿ ನಡೆದ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ರೈತರು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಸಿಂದಗಿಯ ತೋಟಗಾರಿಕೆ ಇಲಾಖೆ ವಿಭಾಗೀಯ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಬೂದಿ, ಕಟ್ಟಿ, ಹಂಡಿ ಎಂಬುವರು ಕಮೀಷನ್ ಕೇಳುತ್ತಿದ್ದಾರೆ.
ಸರ್ಕಾರ ಹನಿ ನೀರಾವರಿ ಪದ್ದತಿಗಾಗಿ ಶೇ. 90 ರಷ್ಟು ಸಬ್ಸಿಡಿ ನೀಡುತ್ತಿದ್ದೆ. ಶೇ.10 ರಷ್ಟು ರೈತರು ಕಟ್ಟಬೇಕಿದ್ದು ಇನ್ನುಳಿದ ಹಣ ಸರ್ಕಾರವೇ ಭರಿಸಲಿದೆ. ಆದರೆ, ಸದರಿ ಅಧಿಕಾರಿಗಳು ಶೇ.40ರಷ್ಟು ಹಣವನ್ನು ಪುನಃ ಅಧಿಕಾರಿಗಳ ಖಾತೆಗೆ ಹಾಕಬೇಕು. ಅಂದಾಗ ಸಬ್ಸಿಡಿ ಮಂಜೂರು ಮಾಡುತ್ತಾರೆ. ಅಲ್ಲದೇ ಅವರು ಸೂಚಿಸಿದ ಅಂಗಡಿ ಅಂಥವಾ ಕಂಪನಿಯ ಸಾಮಗ್ರಿ ಯನ್ನೇ ಪಡೆಯಬೇಕಿದೆ. ಅಲ್ಲದೇ, ಬೆಳೆ ಸಹ ಅವರು ಹೇಳಿದ ತಳಿಯನ್ನೇ ಪಡೆಯಬೇಕಿದೆ. ಆ ಮೂಲಕ ಅಧಿಕಾರಿಗಳು ದಂಧೆ ನಡೆಸಿದ್ದಾರೆಂದು ರಂಜುಣಗಿ ಆರೋಪಿಸಿದರು. ರೈತ ಅಶೋಕ ಸಂಗಪ್ಪ ಅಲ್ಲಾಪುರ ಸಹ ಆಕ್ರೋಶ ವ್ಯಕ್ತಪಡಿಸಿದರು.
ಕೆಲವು ಕ್ಷಣ ಜಿಲ್ಲಾ ಉಸ್ತುವಾರಿ ಸಚಿವೆ ಜೊಲ್ಲೆ ಹಾಗೂ ರೈತರ ರಂಜುಣಗಿ ಮಧ್ಯೆ ವಾಗ್ವಾದ ನಡೆಯಿತು. ಬಳಿಕ ಪೊಲೀಸರು ಬಲವಂತದಿಂದ ರಂಜುಣಗಿಯನ್ನು ವೇದಿಕೆಯಿಂದ ಕೆಳಗಿಳಿಸಲು ಮುಂದಾದಾಗ ಸಚಿವೆ ಜೊಲ್ಲೆ ತಡೆದು ಅಧಿಕಾರಿಗಳನ್ನು ವಿಚಾರಿಸುವುದಾಗಿ ಸಮಜಾಯಿಷಿ ನೀಡಿದರು.