More

    ಸಂಸ್ಕಾರ ಬಿತ್ತರಿಸುವ ಜಂಗಮರ ಸೇವೆ ಅಮೂಲ್ಯ: ಶ್ರೀ ಮಹಾಂತ ಸ್ವಾಮೀಜಿ

    ಸೊರಬ: ಜಂಗಮ ಎನ್ನುವುದು ಜಾತಿ, ಮತ ಭೇದವನ್ನು ಮೀರಿ ಒಂದು ತತ್ವದ ಅಡಿಯಲ್ಲಿ ನಡೆದುಕೊಳ್ಳುವ ಹಾಗೂ ಸಂಸ್ಕಾರ ನೀಡುವಂತಹ ಧಾರ್ಮಿಕ ವ್ಯವಸ್ಥೆ ಎಂದು ಜಡೆ ಸಂಸ್ಥಾನ ಹಾಗೂ ಮುರುಘಾ ಮಠದ ಡಾ. ಶ್ರೀಮಹಾಂತ ಸ್ವಾಮೀಜಿ ಹೇಳಿದರು.
    ಪಟ್ಟಣದ ಮುರುಘಾ ಮಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 203ನೇ ಶಿವಾನುಭವ ಕಾರ್ಯಕ್ರಮ ಹಾಗೂ ತಾಲೂಕು ಬೇಡ ಜಂಗಮ ಸಮಾಜದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
    ಸಾಮಾಜಿಕವಾಗಿ ದುರ್ಬಲಗೊಂಡಿರುವ ಬೇಡ ಸಮಾಜ ಇಂದಿನ ವ್ಯವಸ್ಥೆಯಲ್ಲಿ ಎಲ್ಲ ರಂಗದಲ್ಲೂ ಬಲಿಷ್ಠಗೊಳ್ಳುವ ಅವಶ್ಯಕತೆ ಇದೆ. ಸಂಘಟನೆಗೆ ಶಕ್ತಿಯಿದ್ದು, ಅದನ್ನು ಬಲಪಡಿಸುವ ಮೂಲಕ ನಿರೀಕ್ಷಿತ ಫಲ ಪಡೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಬೇಡ ಜಂಗಮ ಸಮಾಜ ಸಂಘಟನೆಗೊಳ್ಳುವ ಮೂಲಕ ಆರ್ಥಿಕವಾಗಿ ಶಕ್ತಿ ಹೊಂದಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದರು.
    ಜಂಗಮರು ಮನೆ ಮನೆಗೆ ತೆರಳಿ ಜೋಳಿಗೆ ಹಿಡಿದು ಭಿಕ್ಷಾಟನೆ ಮಾಡುವ ಜತೆಗೆ ಧರ್ಮ ಜಾಗೃತಿ, ಸಂಸ್ಕಾರ, ಶಿಕ್ಷಣ ಹಾಗೂ ಪ್ರಜ್ಞಾವಂತ ನಾಗರಿಕರನ್ನಾಗಿ ಮಾಡಲು ತಮ್ಮ ಕಾಯಕವನ್ನು ಮುಡುಪಾಗಿಟ್ಟಿದ್ದರು. ಮುಂದಿನ ಪೀಳಿಗೆಗೆ ಧರ್ಮ ಹಾಗೂ ಸಂಸ್ಕಾರ ಬಿತ್ತಿರಿಸುವಲ್ಲಿ ಜಂಗಮರ ಸೇವೆ ಅಮೂಲ್ಯವಾಗಿದೆ ಎಂದರು.
    ಜಡೆ ಹಿರೇಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ, ಜಂಗಮ ತತ್ವದ ಆಚಾರ-ವಿಚಾರಗಳನ್ನು ಅಭದ್ರಗೊಳಿಸದೆ ಸಮಾಜದ ಸಂಘಟನೆಯನ್ನು ದುಡಿಮೆಯ ಮೂಲಕ ಅಂತರಂಗ ಹಾಗೂ ಬಹಿರಂಗವಾಗಿ ಪ್ರಚಾರ ಪಡಿಸುವ ನಿಟ್ಟಿನಲ್ಲಿ ಜಂಗಮ ಸಮಾಜವನ್ನು ಪೋಷಿಸಬೇಕಿದೆ. ಕಾಯಕ ಯೋಗದಿಂದ ಸಮಾಜ ನಿರ್ಮಣವಾಗಿದ್ದು, ಸಾಮಾಜಿಕವಾಗಿ ಸಮಾನತೆ ಹೊಂದಲು ಎಲ್ಲರೂ ಸೇರಿ ಹೋರಾಟ ಮಾಡಬೇಕಿದೆ. ಜಂಗಮತ್ವವನ್ನು ಶುದ್ಧ ಚಿತ್ತದಿಂದ ಉಳಿಸಿ ಕೊಳ್ಳಬೇಕು. ಅಪ್ಪನ ಆಸ್ತಿಯನ್ನು ಮಗನು ಪಡೆಯುವಂತೆ ಸಂಸ್ಕಾರವನ್ನೂ ಮಕ್ಕಳು ಪಡೆದರೆ ಯಾವ ವ್ಯವಸ್ಥೆಯನ್ನು ಹಾಳು ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
    ತಾಲೂಕು ಬೇಡ ಜಂಗಮ ಸಮಾಜದ ನೂತನ ಪದಾಧಿಕಾರಿಗಳ ಪದ್ರಗಹಣ ನಡೆಯಿತು. ಶತಾಯುಷಿ ವೇದಮೂತಿ ಚನ್ನಮಲ್ಲಯ್ಯ ಅವರನ್ನು ಸನ್ಮಾನಿಸಲಾಯಿತು. ಗೇರುಕೊಪ್ಪ ಮಠದ ಶ್ರೀ ಶಿವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts