ದಾವಣಗೆರೆ: ತೋಳಹುಣಸೆಯ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಂಭ್ರಮ-2023 ರಾಜ್ಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಗರದ ಡಾ. ಶಾಮನೂರು ಶಿವಶಂಕರಪ್ಪ ನ್ಯಾಷನಲ್ ಪಬ್ಲಿಕ್ ಶಾಲೆ ಸಮಗ್ರ ಪಾರಿತೋಷಕ ಪಡೆದುಕೊಂಡಿತು.
ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡಿ, 195 ಅಂಕ ಪಡೆಯುವ ಮೂಲಕ ಶಾಲೆಯ ಸಮಗ್ರ ಪ್ರಶಸ್ತಿಗೆ ಭಾಜನವಾಯಿತು. 125 ಅಂಕಗಳನ್ನು ಪಡೆದು ಸಮ ಸ್ಥಿತಿ ಕಾಯ್ದುಕೊಂಡಿದ್ದ ಎಂಸಿಸಿ ಎ ಬ್ಲಾಕ್ನ ಬಾಪೂಜಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ರಾಣೆಬೆನ್ನೂರು ನಿಟ್ಟೂರು ಸೆಂಟ್ರಲ್ ಸ್ಕೂಲ್ ದ್ವಿತೀಯ ಬಹುಮಾನ ಪಡೆದವು. ಅಮೃತ ವಿದ್ಯಾಲಯ ಪಪೂ ಕಾಲೇಜು (120 ಅಂಕ) ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ದಾವಣಗೆರೆ ಅಲ್ಲದೇ ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ ಸೇರಿ 10 ಜಿಲ್ಲೆಗಳಿಂದ 40 ಶಾಲಾ ತಂಡಗಳು ಭಾಗಿಯಾಗಿದ್ದವು. ಚಿತ್ರಕಲೆ, ಸಂಗೀತ, ನೃತ್ಯ, ನಾಟಕ, ಛಾಯಾಗ್ರಹಣ, ರಂಗೋಲಿ,ಸಾಕ್ಷ ್ಯಚಿತ್ರ, ಮಣ್ಣಿನ ಕರಕೌಶಲ ಕಲೆ ಸೇರಿ ಒಟ್ಟು ಮೂವತ್ತೆಂಟು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಆಯಾ ಸ್ಪರ್ಧೆ ವಿಜೇತರಿಗೆ ನಗದು ಬಹುಮಾನ ನೀಡಲಾಯಿತು.
ಆರು ವಿವಿಧ ವೇದಿಕೆಗಳಲ್ಲಿ ವೈಯಕ್ತಿಕ ಮತ್ತು ಸಮೂಹ ಸ್ಪರ್ಧೆಗಳು ನಡೆದವು. ಮುಖ್ಯ ವೇದಿಕೆಯಲ್ಲಿ ನೃತ್ಯ ಕಾರ್ಯಕ್ರಮಗಳು ಮುದ ನೀಡಿದವು. ಸಿರಿಗೆರೆಯ ತರಳಬಾಳು ಶಾಲೆಯ ವಿದ್ಯಾರ್ಥಿಗಳು ನೀಡಿದ ಮಲ್ಲಕಂಬ ಪ್ರದರ್ಶನ ರೋಮಾಂಚನಕಾರಿಯಾಗಿತ್ತು. ಯಕ್ಷಗಾನ ಪ್ರದರ್ಶನ ಪ್ರೇಕ್ಷಕರ ಕಣ್ಮನ ಸೆಳೆಯಿತು.
ತೋಳಹುಣಸೆಯ ಪಿಎಸ್ಎಸ್ಇಎಂಆರ್ ಶಾಲೆ, ಎಸ್ಪಿಎಸ್ಎಸ್ ಪಪೂ ಕಾಲೇಜು, ಬಿಎಚ್ಪಿಇಎಂ ಶಾಲೆ, ಡಾ.ಎಸ್.ಎಸ್.ಎನ್.ಪಿ.ಶಾಲೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಸ್ಥ ಮಂಜುನಾಥ ರಂಗರಾಜು, ವಿವಿಧ ಶಾಲೆಗಳ ಪ್ರಾಚಾರ್ಯರಾದ ಜೆ.ಎಸ್.ವನಿತಾ, ಪ್ರೀತಿ ಸಿಂಗ್, ಬಿ.ಎನ್.ಕಮಲಾ, ಅರುಣ್ಪ್ರಸಾದ್, ರಾಜೇಶ್ ಪ್ರಸಾದ್ ಇತರರಿದ್ದರು. ಸಮೃದ್ಧ್, ಶ್ರದ್ಧಾ, ಸುಶ್ರುತ್ ಕಾರ್ಯಕ್ರಮ ನಿರೂಪಿಸಿದರು.
——