ಚಿತ್ರದುರ್ಗ: ಹೊರವಲಯದ ಭೋವಿ ಗುರುಪೀಠದಲ್ಲಿ ಮಂಗಳವಾರ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರ ದೀಕ್ಷಾ ರಜತ ಮಹೋತ್ಸವ, ಪಟ್ಟಾಭಿಷೇಕದ 14ನೇ ವಾರ್ಷಿಕೋತ್ಸವ, ರಾಷ್ಟ್ರೀಯ ಭೋವಿ ಜನೋತ್ಸವ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.
ನಾಡಿನ ಮೂಲೆ-ಮೂಲೆಗಳಿಂದ ಬಂದಿದ್ದ ಸಮಾಜದವರು, ಶ್ರೀಮಠದ ಅನುಯಾಯಿಗಳು ಶ್ರೀಗಳಿಗೆ ಹಣ್ಣು ಅರ್ಪಿಸಿ, ಶಾಲು, ಹೂವಿನ ಹಾರಗಳನ್ನು ಹಾಕಿ ಗೌರವ ಸಲ್ಲಿಸಿದರು. ಶ್ರೀ ಮಠದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಸಮಾಜಕ್ಕಾಗಿ 300 ಕೋಟಿ ರೂ. ಆಸ್ತಿ
ಹೊಸದುರ್ಗದ ಕುಂಚಿಟಿಗ ಮಹಾಸಂಸ್ಥಾನದ ಶ್ರೀ ಶಾಂತವೀರ ಸ್ವಾಮೀಜಿ ಮಾತನಾಡಿ, ಭೋವಿ ಸಮಾಜಕ್ಕಾಗಿ ಇಮ್ಮಡಿ ಶ್ರೀ ಸಿದ್ದರಾ ಮೇಶ್ವರ ಸ್ವಾಮೀಜಿ 300 ಕೋಟಿ ರೂ. ಆಸ್ತಿ ಮಾಡಿದ್ದಾರೆ. ಜನಾಂಗದ ಒಳಿತಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಶೈಕ್ಷಣಿಕ,ಆರ್ಥಿಕ, ರಾಜಕೀಯವಾಗಿ ಶಕ್ತಿವಂತರಾದಾಗ ಯಾವುದೇ ಸಮಾಜವಾಗಲಿ ಪ್ರಗತಿ ಹೊಂದಲು ಸಾಧ್ಯ ಎಂದು ಹೇಳಿದರು.
ಆರಂಭದಲ್ಲಿ ಚಿಕ್ಕ ಗುಡಿಸಲಿನಂತಿದ್ದ ಶ್ರೀ ಮಠದ ಕಟ್ಟಡಗಳು ಇಂದು ಆಧುನಿಕ ಶೈಲಿಯಲ್ಲಿ ನಿರ್ಮಾಣವಾಗಿವೆ. ಸರ್ಕಾರದಿಂದ ಅನುದಾನ ತರುವ ಮೂಲಕ ಪ್ರಗತಿಯತ್ತ ಕೊಂಡೊಯ್ಯುತ್ತಿದ್ದಾರೆ. ಮಾತೃ ಹೃದಯಿಯಾಗಿ ಸಮುದಾಯಕ್ಕಾಗಿ ದುಡಿಯುತ್ತಿದ್ದಾರೆ ಎಂದರು.
ಶಾಸಕ ಎಂ. ಚಂದ್ರಪ್ಪ ಮಾತನಾಡಿ, ಶ್ರೀಗಳು ಸಮುದಾಯ ಒಗ್ಗೂಡಿಸುವ ಕಾರ್ಯ ಮಾಡಿದ್ದಾರೆ. ದೊಡ್ಡ ಮಟ್ಟದಲ್ಲಿ ವಿವಿಧ ಸಮಾಜದ ವಿಶ್ವಾಸ ಗಳಿಸಿದ್ದಾರೆ. ಮಠಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಸಾಧನೆಗೈದು ಮಾದರಿಯಾಗಿದ್ದಾರೆ. ಸಮುದಾಯದವರು ಇದರ ಸದುಪಯೋಗ ಪಡೆಯಬೇಕಿದೆ. ಶಾಸಕನಾಗಿ ಸಮಾಜಕ್ಕೆ ಅಗತ್ಯ ನೆರವು ನೀಡಲು ಸದಾ ಸಿದ್ಧ ಎಂದರು.
ಇದೇ ವೇಳೆ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ನಾಡಿನ ವಿವಿಧ ಮಠಾಧೀಶರು, ಸಮಾಜದ ಚುನಾಯಿತ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಕೋಟ್
ಶ್ರೀಗಳು ಜವಾಬ್ದಾರಿ ಹೊತ್ತ ಮೇಲೆ ಸಮಾಜದ ಪ್ರಗತಿಯತ್ತ ಸಾಗುತ್ತಿದೆ. ಜನರ ಸಮಸ್ಯೆ ಆಲಿಸುವ ಮೂಲಕ ಪರಿಹಾರಕ್ಕೆ ಮುಂದಾಗಿದ್ದಾರೆ.
ರಾಮಪ್ಪ, ಮುಖಂಡ