More

    ಸಂಪ್ರದಾಯ ಉಲ್ಲಂಘಿಸಿದ್ದಕ್ಕಾಗಿ ಗ್ರಾಮಸ್ಥರ ಆಕ್ರೋಶ

    ಸವಣೂರ: ಮೃತ ವ್ಯಕ್ತಿಯ ಗಂಟಲ ದ್ರವ ಪರೀಕ್ಷೆಯನ್ನೂ ನಡೆಸಬೇಕು ಎಂಬ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಕುಣಿಯಲ್ಲಿ ಇಟ್ಟಿದ್ದ ಶವದಿಂದ ಸ್ವ್ಯಾಬ್ ಸಂಗ್ರಹಿಸಲು ಮುಂದಾದ ಲ್ಯಾಬ್ ಟೆಕ್ನಿಷಿಯನ್ ಒಬ್ಬರು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾದ ಘಟನೆ ತಾಲೂಕಿನ ಹಿರೇಮೂಗದೂರ ಗ್ರಾಮದಲ್ಲಿ ಭಾನುವಾರ ನಡೆದಿದೆ.

    ಸವಣೂರ ಪಟ್ಟಣದಲ್ಲಿ ಎರಡು ಕರೊನಾ ಕೇಸ್ ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ತಾಲೂಕು ಆಡಳಿತವು ನಿಧನ ಹೊಂದಿದ ಪ್ರತಿ ವ್ಯಕ್ತಿಯ ಗಂಟಲ ದ್ರವ ಪರೀಕ್ಷೆ ನಡೆಸಬೇಕು ಎಂದು ಸೂಚನೆ ನೀಡಿದೆ.

    ಇದರನುಸಾರವಾಗಿ, ಆರೋಗ್ಯ ಇಲಾಖೆಯವರು ಹಿರೇಮೂಗದೂರ ಗ್ರಾಮದಲ್ಲಿ ಸಾವನ್ನಪ್ಪಿದ 75 ವರ್ಷದ ವ್ಯಕ್ತಿಯ ಸ್ವ್ಯಾಬ್ (ಗಂಟಲ ದ್ರವ) ತೆಗೆದುಕೊಳ್ಳಲು ಮುಂದಾದರು. ಸವಣೂರು ತಾಲೂಕು ಆಸ್ಪತ್ರೆಯಲ್ಲಿ ಸದ್ಯ ಗುತ್ತಿಗೆ ಆಧಾರದಲ್ಲಿ ನಿಯೋಜನೆಗೊಂಡಿರುವ ಸವಣೂರಿನ ಟೆಕ್ನಿಷಿಯನ್ ಶೋಭಾ ಚನ್ನಪ್ಪನವರ ಅವರನ್ನು ಸ್ವ್ಯಾಬ್ ಸಂಗ್ರಹಿಸಲು ಹಿರೇಮೂಗದೂರ ಗ್ರಾಮಕ್ಕೆ ಕಳುಹಿಸಲಾಯಿತು. ಇವರು ಕುಣಿಯಲ್ಲಿದ್ದ ಶವದ ಸ್ವ್ಯಾಬ್ ಸಂಗ್ರಹಿಸಲು ಮುಂದಾದಾಗ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಬೆಳಗ್ಗೆ 10 ಗಂಟೆಗೆ ವ್ಯಕ್ತಿ ಮೃತಪಟ್ಟಿರುವುದನ್ನು ತಾಲೂಕು ಆರೋಗ್ಯಾಧಿಕಾರಿಗಳಿಗೆ ಗ್ರಾಮಸ್ಥರು ತಿಳಿಸಿದ್ದರು. ಆದರೆ, ಮಧ್ಯಾಹ್ನ 3 ಗಂಟೆಯವರೆಗೂ ಯಾರು ಬಾರದ್ದರಿಂದ ಗ್ರಾಮಸ್ಥರು ಶವ ಹೊತ್ತು ಸ್ಮಶಾನಕ್ಕೆ ತೆರಳಿದ್ದರು.

    ಹಿಂದು ಸಂಪ್ರದಾಯದ ಪ್ರಕಾರ ಮಹಿಳೆಯನ್ನು ಕುಣಿಯಲ್ಲಿ ಇಳಿಯಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ತಕರಾರು ವ್ಯಕ್ತಪಡಿಸಿದರು. ಆದರೆ, ಸರ್ಕಾರದ ಆದೇಶ ಪಾಲನೆಗೆ ಅಡ್ಡಿಪಡಿಸಿದರೆ ಕಾನೂನಾತ್ಮಕ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿ, ನಂತರ ಮನವೊಲಿಸಿ ಸ್ಮಶಾನದ ಕುಣಿಯಲ್ಲಿನ ಶವದಿಂದ ಗಂಟಲ ದ್ರವವನ್ನು ಶೋಭಾ ಪಡೆದುಕೊಂಡರು.

    ಗುತ್ತಿಗೆ ಆಧಾರದ ಮೇಲೆ ನಾನು ಕಾರ್ಯವನ್ನು ನಿರ್ವಹಿಸುತ್ತಿದ್ದೇವೆ. ಅಧಿಕಾರ ಆದೇಶದ ಮೇರೆಗೆ ಇಂತಹ ಕಠಿಣ ಕಾರ್ಯ ಮಾಡಿದ್ದೇನೆ. ಗ್ರಾಮಕ್ಕೆ ತೆರಳಿದ ನಂತರವೇ ನನಗೆ ಗೊತ್ತಾಗಿದ್ದು ಅದು ಶವ ಎಂದು. ಬಹಳ ಕಷ್ಟಕರವಾಯಿತು. ಒಬ್ಬ ಮಹಿಳೆಯಾಗಿ ಸಂಪ್ರದಾಯ ಮುರಿದು ಕುಣಿಯಲ್ಲಿ ಇಳಿದು ಶವದ ಗಂಟಲ ದ್ರವ ಪಡೆದು ಪ್ರಾಮಾಣಿಕವಾಗಿ ಸೇವೆಗೈದ ಬಗ್ಗೆ ಹೆಮ್ಮೆ ಇದೆ.
    ಶೋಭಾ ಚನ್ನಪ್ಪನವರ, ಲ್ಯಾಬ್ ಟೆಕ್ನಿಷಿಯನ್

    ಲ್ಯಾಬ್ ಟೆಕ್ನಿಷಿಯನ್​ಗೆ ಗಂಟಲ ದ್ರವವನ್ನು ಪಡೆಯಲು ಪ್ರಾಥಮಿಕ ತರಬೇತಿಯನ್ನು ಸ್ಥಳೀಯವಾಗಿ ವೈದ್ಯಾಧಿಕಾರಿಗಳು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಶೋಭಾ ಚನ್ನಪ್ಪನವರ ಅವರನ್ನು ಹಿರೇಮೂಗದೂರಿಗೆ ಕಳುಹಿಸಲು ಕರೆ ಮಾಡಿದರೆ ಅವರು ಸ್ಪಂದಿಸುವುದು ತಡವಾಗಿದ್ದರಿಂದ ಗೊಂದಲ ಉಂಟಾಗಿದೆ.
    >ಡಾ. ಚಂದ್ರಕಲಾ ಜೆ., ಟಿಎಚ್​ಒ, ಸವಣೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts