More

    ಸಂಚಾರಿ ಫೀವರ್ ಕ್ಲಿನಿಕ್ ಆರಂಭ

    ಹುಬ್ಬಳ್ಳಿ: ನಗರದ ಕಂಟೈನ್​ವೆುಂಟ್ ಪ್ರದೇಶದಲ್ಲಿ ಆರೋಗ್ಯ ತಪಾಸಣೆ ಹೆಚ್ಚಿಸುವ ಉದ್ದೇಶದಿಂದ ವಾಕರಸಾಸಂ, ಜಿಲ್ಲಾಡಳಿತ, ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಪ್ರಾರಂಭಿಸಿರುವ ಸಂಚಾರಿ ಫೀವರ್ ಕ್ಲಿನಿಕ್ ಮತ್ತು ಎಚ್ ಡಿಬಿಆರ್​ಟಿಎಸ್ ಕಂಟ್ರೋಲ್ ರೂಂನ ಕಾರ್ಯಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರು ಶನಿವಾರ ಪರಿಶೀಲಿಸಿದರು.

    ಹೊಸೂರಿನ ಬಿಆರ್​ಟಿಎಸ್ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಕಂಟ್ರೋಲ್ ರೂಂನಲ್ಲಿ ಅವಳಿ ನಗರದ ವಿವಿಧೆಡೆ ಅಳವಡಿಸಿರುವ ಸಿಸಿ ಕ್ಯಾಮರಾಗಳ ಮಾನಿಟರಿಂಗ್ ವ್ಯವಸ್ಥೆ ಹಾಗೂ ಕೋವಿಡ್ ಪಾಸಿಟಿವ್ ಸೋಂಕಿತರ ಸಂಪರ್ಕ ಸಂಗ್ರಹ, ಕ್ವಾರಂಟೈನ್​ನಲ್ಲಿ ಇರುವ ವ್ಯಕ್ತಿಗಳ ನಿಗಾವಹಿಸುವಿಕೆಯ ಕೇಂದ್ರೀಕೃತ ಕಾರ್ಯ, ವ್ಯಾಪಾರಿಗಳು ಮತ್ತು ವಿವಿಧ ತುರ್ತು ಉದ್ದೇಶಗಳಿಗೆ ಸಾರ್ವಜನಿಕರಿಗೆ ಇ-ಪಾಸ್ ವಿತರಣೆಗೆ ಮಾಡಿರುವ ವ್ಯವಸ್ಥೆ ಪರಿಶೀಲಿಸಿದರು. ನಂತರ ಮೊಬೈಲ್ ಫೀವರ್ ಕ್ಲಿನಿಕ್ ಪ್ರವೇಶಿಸಿ ದ್ವಾರದಲ್ಲಿ ಅಳವಡಿಸಿರುವ ಸ್ಯಾನಿಟೈಸರ್, ಹ್ಯಾಂಡ್ ವಾಷ್ ಬೇಸಿನ್, ನರ್ಸ್ ಸಲಹಾ ವಿಭಾಗ, ವೈದ್ಯರ ಕನ್ಸಲ್ಟೇಷನ್ ಮತ್ತು ಪರೀಕ್ಷಾ ವಿಭಾಗಗಳ ರಚನೆಯನ್ನು ವೀಕ್ಷಿಸಿದರು.

    ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ವಾಕರ ಸಾರಿಗೆ ಸಂಸ್ಥೆ ಒಂದು ಬಸ್​ಅನ್ನು ಫೀವರ್ ಕ್ಲಿನಿಕ್​ಗೆ ಮಿಸಲಿಟ್ಟಿದೆ. ಅದನ್ನು ಮಿನಿ ಆಸ್ಪತ್ರೆ ಮಾದರಿಯಲ್ಲಿ ಪರಿವರ್ತಿಸಲಾಗಿದೆ. ಅಲ್ಲಿ ಒಬ್ಬರು ವೈದ್ಯರು, ನರ್ಸ್, ಸಿಬ್ಬಂದಿ ಇರುತ್ತಾರೆ, ಹುಬ್ಬಳ್ಳಿ ಕಂಟೈನ್​ವೆುಂಟ್ ಪ್ರದೇಶದ ಬೇರೆ ಬೇರೆ ಭಾಗಗಳಲ್ಲಿ ಸಂಚರಿಸಿ ಆರೋಗ್ಯದ ಸಮಸ್ಯೆ ಇದ್ದವರ ಪ್ರಾಥಮಿಕ ತಪಾಸಣೆ ಮಾಡಲಿದೆ. ಕೆಮ್ಮು, ಕಫ, ಜ್ವರದ ಬಗ್ಗೆ ಆತಂಕ ಇರುವವರು ಆಸ್ಪತ್ರೆಗೆ ಹೋಗದಿದ್ದರೂ ತಮ್ಮ ಸ್ಥಳದಲ್ಲಿ ತಪಾಸಣೆ ಮಾಡಿಸಿಕೊಳ್ಳಬಹುದು. ಆಗ ಯಾವುದಾದರೂ ಲಕ್ಷಣಗಳು ಕಂಡು ಬಂದರೆ ತಕ್ಷಣ ಆಂಬುಲೆನ್ಸ್ ವ್ಯವಸ್ಥೆ ಮಾಡಿ ಕಿಮ್್ಸ ಆಸ್ಪತ್ರೆಗೆ ಕಳುಹಿಸಿಕೊಡಲಾಗುವುದು. ಬಿಆರ್​ಟಿಎಸ್ ಕಂಟ್ರೋಲ್ ರೂಂ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲಿದೆ. ಇ ಪಾಸ್ ವಿತರಣೆ ಜನರಿಗೆ ಅನುಕೂಲವಾಗಲಿದೆ ಎಂದರು.

    ವಾಕರಸಾಸಂ ಅಧ್ಯಕ್ಷ ವಿ.ಎಸ್. ಪಾಟೀಲ, ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಪಂ ಸಿಇಒ ಡಾ. ಬಿ.ಸಿ. ಸತೀಶ, ಮಹಾನಗರಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಶಕೀಲ ಅಹ್ಮದ್, ಗಣೇಶ ರಾಠೋಡ, ಡಾ. ಯಶವಂತ ಮದೀನಕರ, ಡಾ. ಎಸ್. ಎಂ. ಹೊನಕೇರಿ, ಶಶಿಧರ ಮಾಡ್ಯಾಳ, ಪ್ರಕಾಶ ನಾಶಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts