ಮೂಗೂರು: ಗ್ರಾಮದ ಶ್ರೀದೇಶೇಶ್ವರಸ್ವಾಮಿ ಹಾಗೂ ಪಾರ್ವತಿ ಅಮ್ಮನವರ ಗಿರಿಜಾ ಕಲ್ಯಾಣ ಮಹೋತ್ಸವದ ಅಂಗವಾಗಿ ನಡೆದ ಶ್ರೀ ದೇಶೇಶ್ವರ ಸ್ವಾಮಿ ಹಾಗೂ ಪಾರ್ವತಿ ಅಮ್ಮನವರ ಬ್ರಹ್ಮರಥೋತ್ಸವ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.
ದೇವೇಶ ಗಿರಿ ಎಂಬ ಹಿನ್ನೆಲೆಯುಳ್ಳ ಪಂಚ ಲಿಂಗಗಳನ್ನು ಒಳಗೊಂಡ ಈ ದೇವಾಲಯ ಶ್ರೀ ಶನೇಶ್ವರ ಸ್ವಾಮಿ, ಶ್ರೀ ಸಿದ್ದೇಶ್ವರ, ಶ್ರೀ ಚಂಡೀಕೇಶ್ವರ, ಶ್ರೀ ವೀರಾಂಜನೇಯ, ಶ್ರೀ ನಾಗರಕಟ್ಟೆ ಬಸವೇಶ್ವರ ದೇಗುಲದ ಸಂಗಮವಗಿದೆ. ರಥೋತ್ಸವದ ನಿಮಿತ್ತ ದೇಗುಲದಲ್ಲಿ ರುದ್ರಾಭಿಷೇಕ ವಿಶೇಷ ಪೂಜೆ ನಡೆದವು. ವಿವಿಧ ಬಗೆಯ ಹೂವಿನಿಂದ, ತಳಿರು-ತೋರಣಗಳಿಂದ ಸಿಂಗಾರಗೊಂಡ ರಥಕ್ಕೆ ಪಾರ್ವತಿ ಅಮ್ಮನವರ ಉತ್ಸವಮೂರ್ತಿಯನ್ನು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿದ ಬಳಿಕ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.
ನೆರೆದಿದ್ದ ಭಕ್ತರ ಘೋಷಣೆ ಕೂಗುತ್ತಿದಂತೆಯೇ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ರಥ ಸಂಚರಿಸಿತು. ದಾರಿಯುದ್ದಕ್ಕೂ ಭಕ್ತ ಸಮೂಹ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ರಥಕ್ಕೆ ಹೆಣ್ಣು, ಧವನ ಅರ್ಪಿಸಿ ನಮಿಸಿದರು. ಶ್ರೀ ತ್ರಿಪುರ ಸುಂದರಿ ಅಮ್ಮನವರ ಸೇವಾ ಸಮಿತಿಯ ವತಿಯಿಂದ ಪ್ರಸಾದ ವಿನಿಯೋಗ ನಡೆಯಿತು. ಗ್ರಾಮದ ಮುಖಂಡರು, ಮುಜರಾಯಿ ಇಲಾಖೆ ಅಧಿಕಾರಿಗಳು, ಅರ್ಚಕ ಸಮೂಹ, ಗ್ರಾಮಸ್ಥರು ಉಪಸ್ಥಿತರಿದ್ದರು.