ಜೊಯಿಡಾ: ಕೋವಿಡ್ ನಿಬಂಧನೆ ನಡುವೆಯೂ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಉಳವಿ ಶ್ರೀ ಚನ್ನಬಸವೇಶ್ವರ ಮಹಾ ರಥೋತ್ಸವ ಶನಿವಾರ ಜರುಗಿತು.
‘ಅಡಿಕೇಶ್ವರ, ಮಡಿಕೇಶ್ವರ ಉಳವಿ ಚನ್ನಬಸವೇಶ್ವರ ಮಹಾರಾಜಕೀ ಜೈ’ ಎಂಬ ಘೊಷಣೆಯೊಂದಿಗೆ ಸಹಸ್ರಾರು ಜನರು ರಥ ಎಳೆದು ಭಕ್ತಿ ಮೆರೆದರು. ಚನ್ನ ಬಸವೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಗಂಗಾಧರ ಕಿತ್ತೂರ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೊಟ್ನೇಕರ ರಥಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಚಾಲನೆ ನೀಡಿದರು. ಟ್ರಸ್ಟ್ ಕಮಿಟಿ ಉಪಾಧ್ಯಕ್ಷ ಸಂಜಯ ಕಿತ್ತೂರ, ಸದಸ್ಯ ಬಿ.ಸಿ. ಉಮಾಪತಿ, ಉಳವಿ ಗ್ರಾಪಂ ಅಧ್ಯಕ್ಷೆ ಮಂಗಲಾ ಮಿರಾಶಿ, ಉಪಾಧ್ಯಕ್ಷ ಮಂಜುನಾಥ ಮುಖಾಶಿ, ಪ್ರಧಾನ ಅರ್ಚಕ ಶಂಕ್ರಯ್ಯ ಕಲ್ಮಠ ಶಾಸ್ತ್ರಿ ಉಪಸ್ಥಿತರಿದ್ದರು.
ಬಿಗಿ ಭದ್ರತೆ: ದಾಂಡೇಲಿ ಪೊಲೀಸ್ ವೃತ್ತ ನಿರೀಕ್ಷಕ ಕೆ.ಎಲ್. ಗಣೇಶ ಮಾರ್ಗದರ್ಶನದಲ್ಲಿ ಜೊಯಿಡಾ ಸಿಪಿಐ ಬಾಬಾ ಸಾಹೇಬ್ ಹುಲ್ಲಣ್ಣನವರ,ದಾಂಡೇಲಿ ಸಿಪಿಐ ಪ್ರಭು ಗಂಗನಹಳ್ಳಿ, ಹಳಿಯಾಳ ಸಿಪಿಐ ಮೋತಿಲಾಲ ಪವಾರ ನೇತೃತ್ವದಲ್ಲಿ ಜೊಯಿಡಾ ಪಿಎಸ್ಐ ಲಕ್ಷ್ಮಣ ಪೂಜಾರ ಮತ್ತು 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಸುಗಮ ಸಂಚಾರ, ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದ್ದರು.
ತಾಲೂಕು ಆಡಳಿತ ನಿರ್ಬಂಧ: ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ಅದ್ದೂರಿ ರಥೋತ್ಸವ ಆಚರಣೆಗೆ ತಾಲೂಕು ಆಡಳಿತ ನಿರ್ಬಂಧ ಹಾಕಿತ್ತು. ಹೆಚ್ಚಿನ ಜನರನ್ನು ಸೇರಿಸಿದರೆ ಕಾನೂನು ಕ್ರಮ ವಹಿಸಲಾಗುವುದು ಎಂದು ನಿಬಂಧನೆ ಹಾಕಿ ಅನುಮತಿ ಪತ್ರ ನೀಡಿತ್ತು. ಆದರೆ, ಉತ್ತರ ಕರ್ನಾಟಕ ಭಾಗದಿಂದ ಚಕ್ಕಡಿಗಳಲ್ಲಿ ಸಾಕಷ್ಟು ಭಕ್ತರು ಬಂದಿದ್ದರು.
*