ಹುಬ್ಬಳ್ಳಿ: ನಗರದ ಜನಪ್ರತಿನಿಧಿಗಳು ಹೆಮ್ಮೆ ಪಟ್ಟುಕೊಳ್ಳುವ ವಿದ್ಯಾನಗರ ಶಿರೂರ್ ಪಾರ್ಕ್ನ ಮಾದರಿ ರಸ್ತೆ (ಟೆಂಡರ್ ಸ್ಯೂರ್)ಯನ್ನು ಅಗೆದು ವಿರೂಪಗೊಳಿಸುವ ಕೆಲಸ ಮುಂದುವರಿದಿದೆ.
ರಸ್ತೆಯಂಚಿನ ಸೈಕಲ್ ಪಾಥ್ ಅನ್ನು ಸೋಮವಾರ ಸುಮಾರು ಒಂದೂವರೆ ಅಡಿ ಆಳ ಅಗೆಯಲಾಗಿದೆ. ಸಂಪೂರ್ಣ ಸಿಮೆಂಟ್ ರಸ್ತೆ ಇದಾಗಿದೆ. ಒಳಚರಂಡಿ ಮಾರ್ಗ ಚೇಂಬರ್ ಬ್ಲಾಕ್ ಆಗಿದ್ದಕ್ಕೆ ಸರಿಪಡಿಸಲು ರಸ್ತೆ ಛಿದ್ರಗೊಳಿಸಲಾಗಿದೆ. ಚೇಂಬರ್ ಮುಚ್ಚಳ ಇನ್ನು ಒಂದೂವರೆ ಅಡಿ ಕೆಳಗಿದ್ದು ಮಂಗಳವಾರ ಅಗೆಯುವ ಕೆಲಸ ಮುಂದುವರಿಯಲಿದೆ.
‘ಒಳಚರಂಡಿ ಮಾರ್ಗ ಬ್ಲಾಕ್ ಆಗಿರುವುದರಿಂದ ಸಿಮೆಂಟ್ ರಸ್ತೆ ಅಗೆಯದೇ ಬೇರೆ ಮಾರ್ಗವಿರಲಿಲ್ಲ. ರಸ್ತೆ ಪಕ್ಕದ ಅಪಾರ್ಟಮೆಂಟ್ಗಳ ಒಳಚರಂಡಿ ಬ್ಲಾಕ್ ಆಗಿ ನಿವಾಸಿಗಳಿಗೆ ಸಮಸ್ಯೆ ಉಂಟಾಗಿದೆ’ ಎಂದು ಪಾಲಿಕೆ ವಲಯ ಕಚೇರಿ (ನಂ. 5) ಸಹಾಯಕ ಆಯುಕ್ತ ಆನಂದಕುಮಾರ ಜಳಕಿ ತಿಳಿಸಿದ್ದಾರೆ.
ಹೀಗೆ ರಸ್ತೆ ಅಗೆದಿರುವಾಗ ಸೈಕಲ್ ಪಾಥ್ ಕೆಳಗೆ ಬಿಎಸ್ಎನ್ಎಲ್ ಕೇಬಲ್ ಹಾದು ಹೋಗಿರುವುದು ಗಮನಕ್ಕೆ ಬಂದಿದೆ. ಸಿಮೆಂಟ್ ಕಾಂಕ್ರೀಟ್ ಜತೆಯೇ ಬಿಎಸ್ಎನ್ಎಲ್ ಕೇಬಲ್ ಸೇರಿದ್ದು ಹೇಗೆ? ಟೆಂಡರ್ ಶ್ಯೂರ್ ರಸ್ತೆಯ ಯೋಜನೆ ಪ್ರಕಾರ ಎಲ್ಲ ರೀತಿಯ ಕೇಬಲ್ಗಳು ಡಕ್ಟ್ನಲ್ಲಿ ಹಾದು ಹೋಗಬೇಕೇ ಹೊರತು ಸಿಮೆಂಟ್ ಕಾಂಕ್ರೀಟ್ ಜತೆ ಅಲ್ಲ. ಲೋಕೋಪಯೋಗಿ ಇಲಾಖೆ ಈ ರಸ್ತೆಯ ಕಾಮಗಾರಿಯನ್ನು ಗುತ್ತಿಗೆ ನೀಡಿತ್ತು. ಗುತ್ತಿಗೆದಾರರು ಯೋಜನೆಯ ಪ್ರಕಾರ ಕೆಲಸ ಮಾಡದೇ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸಿದಂತಿದೆ. ಮುಂದೆ ಬಿಎಸ್ಎನ್ಎಲ್ ಕೇಬಲ್ನಲ್ಲಿ ದೋಷ ಕಂಡು ಬಂದರೆ ಉದ್ದಕ್ಕೆ ಸೈಕಲ್ ಪಾಥ್ನ್ನು ಅಗೆಯಬೇಕಾಗಿ ಬರಬಹುದು.