ಶಶಿಧರ ಕುಲಕರ್ಣಿ ಮುಂಡಗೋಡ
ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಅವರ ಕನಸಾಗಿದ್ದ ಶಿಂಗನಳ್ಳಿ ಜಲಾಶಯವು ಸಮರ್ಪಕ ನಿರ್ವಹಣೆ ಇಲ್ಲದೆ ಒಡ್ಡಿನ ಗುಂಟ ಗಿಡ-ಗಂಟೆಗಳು ಬೆಳೆದು ಜಲಾಶಯದ ಹನಿ ನೀರೂ ಕೃಷಿ ಭೂಮಿಗೆ ಮುಟ್ಟದಿರುವುದು ಇಲ್ಲಿನ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಕನ್ನಡಿಯಂತಿದೆ.
97 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಹೊಂದಿದ ಜಲಾಶಯ ಇದಾಗಿದ್ದು, ಓರಲಗಿ, ಓಣಿಕೇರಿ ಹಾಗೂ ಮರಗಡಿ ಭಾಗದಿಂದ ಕಾಡಿನ ಮೂಲಕ ನೀರು ಹರಿದು ಬಂದು ಇಲ್ಲಿ ಸಂಗ್ರಹವಾಗುತ್ತದೆ. ಪ್ರತಿ ವರ್ಷ ಜಲಾಶಯ ತುಂಬಿ ಕೋಡಿ ಬಿದ್ದರೂ ಕೃಷಿ ಜಮೀನಿಗೆ ನೀರು ಮುಟ್ಟುತ್ತಿಲ್ಲ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಜಲಾಶಯದ ನಿರ್ವಹಣೆ ಸಮರ್ಪಕವಾಗಿ ಮಾಡುತ್ತಿಲ್ಲ. ಒಡ್ಡಿನ ಗುಂಟ ಗಿಡ-ಗಂಟೆಗಳು ಬೆಳೆದು ನಿಂತಿವೆ. ಅವು ದೊಡ್ಡದಾಗಿ ಬೆಳೆದು ಬೇರುಗಳಿಂದ ಒಡ್ಡುಗಳಿಗೆ ರಂಧ್ರ ಬೀಳುವ ಸಾಧ್ಯತೆ ಇದೆ. ಈ ಜಲಾಶಯ ತುಂಬಿ ಅಂತರ್ಜಲ ಮಟ್ಟ ಹೆಚ್ಚಿದರೆ ಪಕ್ಕದ ಗ್ರಾಮಗಳಾದ ಕಾತೂರ, ನಂದಿಪುರ, ಶಿಂಗನಳ್ಳಿ, ಹನುಮಾಪುರ, ನಾಗನೂರ, ಚಿಪಗೇರಿ ಇನ್ನೂ ಅನೇಕ ದೊಡ್ಡ-ದೊಡ್ಡ ಕೆರೆಗಳು ತುಂಬಿ ರೈತರಿಗೆ ವರದಾನವಾಗುತ್ತದೆ.
ಕಳೆದ ವರ್ಷ ಬೇರೆ ಕೆರೆಗಳಿಗೆ ಅನುದಾನ ಬಂದಿತ್ತು. ಆದರೆ, ಶಿಂಗನಳ್ಳಿ ಜಲಾಶಯದ ನಿರ್ವಹಣೆಗೆ ಅನುದಾನ ಬಂದಿರಲಿಲ್ಲ. ಹೀಗಾಗಿ ಅದರ ನಿರ್ವಹಣೆ ಮಾಡಿಲ್ಲ. ಈ ವರ್ಷ ಅನುದಾನ ಬಂದರೆ ನಿರ್ವಹಣೆ ಮಾಡಲಾಗುವುದು. | ಗಿರೀಶ ಜೋಶಿ ಎಇಇ ಸಣ್ಣ ನೀರಾವರಿ ಇಲಾಖೆ ಉಪ ವಿಭಾಗ ಮುಂಡಗೋಡ
ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕೂಡಲೆ ಎಚ್ಚೆತ್ತುಕೊಂಡು ಈ ಕಡೆ ಲಕ್ಷ್ಯ ವಹಿಸಿ ಶಿಂಗನಳ್ಳಿ ಜಲಾಶಯದ ನೀರು ಪ್ರತಿ ರೈತನ ಹೊಲಕ್ಕೆ ಮುಟ್ಟಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ರೈತರಲ್ಲ ಸೇರಿ ಕ್ರಾಂತಿ ಮಾಡಬೇಕಾಗುತ್ತದೆ. ಅದಕ್ಕೆ ಅವಕಾಶ ನೀಡಬೇಡಿ. | ಜಲಾಶಯ ಭಾಗದ ರೈತರು