ಶಿರಹಟ್ಟಿ: ಪಟ್ಟಣ ಪಂಚಾಯಿತಿ 2ನೇ ವಾರ್ಡ್ ವ್ಯಾಪ್ತಿಯ ಹರಿಪುರ ಗ್ರಾಮದ ಸ್ಮಶಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬದಿ ಬೆಳೆದಿರುವ ಜಾಲಿ ಕಂಟಿ ತೆರವುಗೊಳಿಸಬೇಕು ಹಾಗೂ ಸ್ಮಶಾದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಪಪಂ ಅಧ್ಯಕ್ಷ ಪರಮೇಶ ಪರಬ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಹರಿಪುರದ ನಿವಾಸಿ ಸಿ.ಪಿ. ಕಾಳಗಿ ಮಾತನಾಡಿ, ಎರಡು ವರ್ಷಗಳ ಹಿಂದೆ ಸ್ಮಶಾನಕ್ಕಾಗಿ 1.5 ಎಕರೆ ಜಾಗ ಖರೀದಿಸಲಾಗಿದೆ. ಆದರೆ, ಸ್ಮಶಾನ ಮಾತ್ರ ಅಭಿವೃದ್ಧಿ ಕಂಡಿಲ್ಲ. ಗ್ರಾಮದಿಂದ ಸ್ಮಶಾನಕ್ಕೆ ತೆರಳುವ 1 ಕಿ.ಮೀ ದಾರಿಯುದ್ದಕ್ಕೂ ಮುಳ್ಳು ಕಂಟಿಗಳು ಬೆಳೆದಿವೆ. ದುರ್ಗಮವಾದ ರಸ್ತೆಯಲ್ಲಿ ಶವ ಹೊತ್ತು ಸಾಗುವುದು ದುಸ್ತರವಾಗಿದೆ. ದಾರಿಯಲ್ಲಿ ಹಳ್ಳ ಇರುವುದರಿಂದ ಮಳೆಗಾಲದಲ್ಲಿ ಸ್ಮಶಾನಕ್ಕೆ ಶವ ಸಾಗಿಸಲು ಹರಸಾಹಸ ಪಡಬೇಕಾಗುತ್ತದೆ. ಈ ಬಗ್ಗೆ ಶಾಸಕರು ಹಾಗೂ ಪಪಂ ಆಡಳಿತ ಮಂಡಳಿ ಸದಸ್ಯರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದರು.
ರಸ್ತೆ ಬದಿಯ ಮುಳ್ಳು ಕಂಟಿ ತೆರವುಗೊಳಿಸಿ ಬೀದಿ ದೀಪ ಅಳವಡಿಸಬೇಕು. ಇಲ್ಲದಿದ್ದರೆ ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಪಪಂ ಕಾರ್ಯಾಲಯದ ಮುಂದೆ ಶವ ಇಟ್ಟು ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪಪಂ ಮುಖ್ಯಾಧಿಕಾರಿ ಮಲ್ಲೇಶ ಎಂ, 2ನೇ ವಾರ್ಡ್ ಸದಸ್ಯ ಮಹಾದೇವ ಗಾಣಿಗೇರ, ಎಂ.ಎಸ್. ಕಾಳಗಿ, ಪ್ರಕಾಶ ಮೂಶಿಳ್ಳಿ, ಎಸ್.ಎಫ್. ಮೊರಬದ, ಎಸ್.ಜಿ. ದೇಸಾಯಿಪಟ್ಟಿ, ಫಕೀರೇಶ ಯಾದಗಿರಿ, ಎಸ್.ಎ. ಮೂಶಿಳ್ಳಿ, ಸಿ.ಎಸ್. ಮಣ್ಣೂರ, ಎಂ.ಪಿ. ದೇಸಾಯಿಪಟ್ಟಿ ಇದ್ದರು.