ಯಾದಗಿರಿ: ವಿಶ್ವಕರ್ಮ ಜಗತ್ತಿನ ಮೊದಲ ಇಂಜಿನಿಯರ್ ಆಗಿದ್ದು, ಅವರ ಸೂಕ್ಷ್ಮ ಕೆತ್ತನೆಯ ಕೆಲಸಗಳು ಸ್ಮರಣೀಯವಾಗಿವೆ ಎಂದು ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ ಬಣ್ಣಿಸಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂನದಲ್ಲಿ ಶನಿವಾರ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಉದ್ಘಾಟಿಸಿ ಮಾತನಾಡಿ, ಇಂದಿಗೂ ಕೂಡ ವಿಶ್ವಕರ್ಮ ಸಮುದಾಯ ತಮ್ಮ ಕುಲ ಕಸುಬುಗಳ ಮೇಲೆ ಅವಲಂಬನೆಯಾಗಿದ್ದು, ಸ್ವಾಭಿಮಾನಿಗಳು ಹಾಗೂ ಕಠಿಣ ಪರಿಶ್ರಮಿಗಳಾಗಿದ್ದಾರೆ ಎಂದರು.
ಸಾನಿಧ್ಯ ವಹಿಸಿ ಮಾತನಾಡಿದ ಏಕದಂಡಗಿ ಮಠದ ಶ್ರೀ ಕುಮಾರಸ್ವಾಮಿಗಳು ಮಾತನಾಡಿ, ಸಮುದಾಯದವರು ಶೈಕ್ಷಣಿಕವಾಗಿ ಮುಂದೆ ಬರುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಸೇರಬೇಕು. ಸಮಾಜಕ್ಕೆ ವಿಶ್ವಕರ್ಮರು ಬಹುದೊಡ್ಡ ಸಾಂಸ್ಕೃತಿಕ ಪರಂಪರೆ ಹಾಕಿಕೊಟ್ಟಿದ್ದಾರೆ. ವಿಶ್ವಕರ್ಮ ಗುರುಗಳು ಮಹಾನ್ ದೈವಿ ಪುರುಷರಾಗಿದ್ದರು. ಅವರ ಶ್ರಮ, ಶಕ್ತಿಗಳಿಂದ ಮಹಾಭಾರತದಲ್ಲಿ ದೇವತೆಗಳು ಧರೆಗಿಳಿದು ಬಂದಿದ್ದನ್ನು ಪುರಾಣ ಪುಣ್ಯಕಥೆಗಳಲ್ಲಿ ಉಲ್ಲೇಖವಿದೆ ಎಂದು ಹೇಳಿದರು.