ಮುಂಡರಗಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ತಗುಲಿ ಅಪಾರ ಪ್ರಮಾಣದ ಕಬ್ಬು ಆಹುತಿಯಾದ ಘಟನೆ ತಾಲೂಕಿನ ಡಂಬಳ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ.
ಗ್ರಾಮದ ಬೀರಪ್ಪ ಬಂಡಿ ಅವರಿಗೆ ಸೇರಿದ ಕಬ್ಬಿನ ಗದ್ದೆಗೆ ಬೆಂಕಿ ಬಿದ್ದಿದೆ. ಅಂದಾಜು 8.15 ಎಕರೆ ಕಬ್ಬಿನ ಬೆಳೆಯಲ್ಲಿ 7ಎಕರೆಯಷ್ಟು ಬೆಂಕಿಗಾಹುತಿಯಾಗಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು.
ಬೀಜ, ಗೊಬ್ಬರ, ಕೂಲಿ ಸೇರಿ ಅಂದಾಜು 2.5 ಲಕ್ಷ ರೂ.ಗಿಂತ ಹೆಚ್ಚು ಖರ್ಚು ಮಾಡಿ ಕಬ್ಬು ಬೆಳೆಯಲಾಗಿತ್ತು. ಕಟಾವಿಗೆ ಬಂದ ಬೆಳೆ ಬೆಂಕಿಗಾಹುತಿಯಾಗಿರುವುದು ರೈತನನ್ನು ಚಿಂತೆಗೀಡು ಮಾಡಿದೆ. ಅಂದಾಜು 425 ಟನ್ನಷ್ಟು ಕಬ್ಬು ಬೆಳೆ ಬೆಂಕಿಗಾಹುತಿ ಆಗಿದ್ದರಿಂದ 11ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ ಎಂದು ಕಂದಾಯ ನಿರೀಕ್ಷಕ ಎಂ.ಎ. ನದಾಫ್ ತಿಳಿಸಿದ್ದಾರೆ.
ಸ್ಥಳಕ್ಕೆ ಹೆಸ್ಕಾಂ ಎಇಇ ಪಾಂಡುರಂಗ ತಳವಾರ, ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ ಇತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕಬ್ಬಿನ ಬೆಳೆಯ ಮೇಲೆ ವಿದ್ಯುತ್ ಲೈನ್ ಹಾದು ಹೋಗಿದೆ. ವಿದ್ಯುತ್ ತಂತಿಯ ಲೈನ್ ಎತ್ತರಿಸುವಂತೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ, ಯಾರೊಬ್ಬರೂ ಸ್ಪಂದಿಸಲಿಲ್ಲ. ಈಗ ಕೈ ಸೇರಬೇಕಿದ್ದ ಕಬ್ಬು ವಿದ್ಯುತ್ ಅವಘಡದಿಂದ ನಾಶವಾಗಿದೆ.
| ಬೀರಪ್ಪ ಬಂಡಿ. ರೈತ ಡಂಬಳ
ಕಬ್ಬು ಬೆಳೆ ನಾಶವಾಗಿರುವುದನ್ನು ಪರಿಶೀಲಿಸಲಾಗಿದೆ. ವಿದ್ಯುತ್ ಲೈನನ್ನು ಎತ್ತರಿಸಲು ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ. ಹೆಸ್ಕಾಂ ಇಲಾಖೆಯಿಂದ ರೈತನಿಗೆ ಅಗತ್ಯ ಪರಿಹಾರ ನೀಡಲಾಗುವುದು.
| ಪಾಂಡುರಂಗ ತಳವಾರ, ಹೆಸ್ಕಾಂ ಎಇಇ ಮುಂಡರಗಿ