ಕೋಲಾರ: ಮಾಜಿ ಸಚಿವ ವರ್ತೂರು ಪ್ರಕಾಶ್ ಪದೇ ಪದೆ ನನ್ನ ಹೆಸರು ಪ್ರಸ್ತಾಪಿಸಿ ನಮ್ಮ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಮಾಜಿ ಸಂಸದ, ಎಐಸಿಸಿ ಆಹ್ವಾನಿತ ಸದಸ್ಯ ಕೆ.ಎಚ್.ಮುನಿಯಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಪಂ ಚುನಾವಣೆ ವೇಳೆ ಹಾಗೂ ಫಲಿತಾಂಶ ಪ್ರಕಟದ ನಂತರ ವರ್ತೂರು ಪ್ರಕಾಶ್ ತಮ್ಮ ಬಣದ ಸಭೆಗಳಲ್ಲಿ ನನ್ನ ಹೆಸರು ಪ್ರಸ್ತಾಪಿಸುತ್ತಿರುವುದು ಬೇಸರವನ್ನುಂಟು ಮಾಡಿದೆ, ಕಾಂಗ್ರೆಸ್ ವಿಚಾರದಲ್ಲಿ ನನಗೂ ವರ್ತೂರು ಪ್ರಕಾಶ್ಗೂ ಯಾವುದೇ ಸಂಬಂಧವಿಲ್ಲ, ನಮ್ಮ ಪಕ್ಷದ ಬಗ್ಗೆ ತಲೆ ಕೆಡಿಸಿಕೊಳ್ಳದಿರುವ ಕಡೆ ನೆಟ್ಟಗಿರಲಿ ಎಂದು ಸೂಚ್ಯವಾಗಿ ನುಡಿದಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈಗಾಗಲೆ ವರ್ತೂರು ಪ್ರಕಾಶ್ ಕಾಂಗ್ರೆಸ್ಸಿಗೆ ಸಂಬಂಧಿಸಿಲ್ಲ, ಯಾವುದೇ ಕಾರಣಕ್ಕೂ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲವೆಂದು ಸ್ಪಷ್ಟನೆ ನೀಡಿದ್ದರೂ ನಮ್ಮ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮುಂದುವರಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ರಾಪಂ ಚುನಾವಣೆಗೆ ಸ್ಪರ್ಧಿಸಿದ್ದ ವರ್ತೂರು ಬೆಂಬಲಿಗರಿಗೆ ನಾನು ಬಿಡಿಗಾಸೂ ಕೊಟ್ಟಿಲ್ಲ, ನಮ್ಮ ಕಾರ್ಯಕರ್ತರು ಸ್ವಂತ ಬಲದಿಂದ ಗೆದ್ದಿದ್ದಾರೆ, ವರ್ತೂರು ಅನಗತ್ಯವಾಗಿ ಸುಳ್ಳು ಹೇಳುತ್ತಿದ್ದು, ಇದನ್ನು ಯಾರೂ ನಂಬುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ವರ್ತೂರು ಕಾಂಗ್ರೆಸ್ಗೆ ಬರುವುದು ನಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಇಷ್ಟವಿಲ್ಲದಿರುವಾಗ ನಾನೇಕೆ ಅವರನ್ನು ಪಕ್ಷಕ್ಕೆ ಕರೆಯಲಿ, ಕ್ಷೇತ್ರದಲ್ಲಿ ಕಾಂಗ್ರೆಸ್ ಕಟ್ಟುವುದು ನನಗೆ ಗೊತ್ತಿದೆ ಎಂದಿದ್ದಾರೆ.