ಬೆಳಗಾವಿ: ಮನುಷ್ಯನ ಅತಿಯಾದ ಆಸೆಯಿಂದ ಇಂದು ಆಮ್ಲಜನಕವನ್ನು ಹಣ ನೀಡಿ ಖರೀದಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪರಿಸ್ಥಿತಿ ಎದುರಾಗಬಾರದೆಂದರೆ ಎಲ್ಲರೂ ವನ್ಯಕುಲದ ರಕ್ಷಣೆಗೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಂದಾಯ ದಿನದ ಅಂಗವಾಗಿ ಕಂದಾಯ ನೌಕರರ ಸಂಘ, ಗ್ರಾಮ ಲೆಕ್ಕಾಧಿಕಾರಿಗಳ ಸಂಘ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ 2 ಸಾವಿರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪರಿಸರ ಸಂರಕ್ಷಣೆ, ಅರಣ್ಯ ಸಂಪತ್ತು ಹೆಚ್ಚಿಸುವ ಉದ್ದೇಶದಿಂದ ಕಂದಾಯ ನೌಕರರ ಸಂಘ, ಗ್ರಾಮ ಲೆಕ್ಕಾಧಿಕಾರಿಗಳ ಸಂಘ ಜಿಲ್ಲಾದ್ಯಂತ 2 ಸಾವಿರಕ್ಕೂ ಅಧಿಕ ಸಸಿ ನೆಡುವ ಕಾರ್ಯಕ್ರಮ ಆಯೋಜಿಸಿರುವುದು ಖುಷಿ ವಿಚಾರ. ಕೆಲಸದ ಒತ್ತಡ ನಡುವೆಯೂ ಪರಿಸರ ಸಂರಕ್ಷಣೆಗೆ ನೌಕರರು, ಸಿಬ್ಬಂದಿ ಕಾಳಜಿ ವಹಿಸುತ್ತಿರುವುದು ಮಾದರಿ ಸಂಗತಿ ಎಂದರು.
ವಿ.ಎ. ಸಂಘದ ಅಧ್ಯಕ್ಷ ಎಲ್.ಆರ್.ಪಾಟೀಲ, ಕಾರ್ಯಕ್ರಮದ ರೂಪುರೇಷೆಗಳ ಕುರಿತು ವಿವರಿಸಿದರು. ಎಡಿಸಿ ಅಶೋಕ ದುಡಗುಂಟಿ, ಎಸಿ ರವೀಂದ್ರ ಕರಲಿಂಗಣ್ಣವರ, ತಹಸೀಲ್ದಾರ್ ಆರ್.ಕೆ.ಕುಲಕರ್ಣಿ, ಪ್ರಕಾಶ ಗಮಾನಿ, ಬಸವರಾಜ ರಾಯವಗೋಳ ಇದ್ದರು.