ಹುಬ್ಬಳ್ಳಿ: ಕರೊನಾ ಸೋಂಕು ಹರಡುವುದನ್ನು ನಿಯಂತ್ರಿಸಲು ಜಾರಿಗೊಳಿಸಿರುವ ಲಾಕ್ಡೌನ್ ಪರಿಶೀಲನೆಗೆ ಆಧುನಿಕ ತಂತ್ರಜ್ಞಾನ ಬಳಸಲಾಗುತ್ತಿದ್ದು, ಹೊಸೂರ ಬಿಆರ್ಟಿಎಸ್ ಮುಖ್ಯ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ವಾರ್ ರೂಂ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಪೊಲೀಸ್ ಆಯುಕ್ತ ಆರ್. ದಿಲೀಪ್, ಬಿಆರ್ಟಿಎಸ್ ಹಾಗೂ ವಾಯವ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಹಾಗೂ ಹಿರಿಯ ಅಧಿಕಾರಿಗಳ ತಂಡ ಗುರುವಾರ ವಾರ್ ರೂಂ ವೀಕ್ಷಿಸಿ ಅಗತ್ಯ ಸಲಹೆ ಸೂಚನೆ ನೀಡಿತು.
ಬಿಆರ್ಟಿಎಸ್ ಡಿಜಿಎಂ ಗಣೇಶ ರಾಠೋಡ್ ವಾರ್ ರೂಂ ಬಗ್ಗೆ ಮಾಹಿತಿ ನೀಡಿದರು. ಬಿಆರ್ಟಿಎಸ್ನ 50, ಪೊಲೀಸ್ ಹಾಗೂ ಮಹಾನಗರ ಪಾಲಿಕೆಯ 250 ಸೇರಿ ಒಟ್ಟು 300 ಸಿಸಿಟಿವಿ ಕ್ಯಾಮರಾಗಳನ್ನು ಅವಳಿನಗರದಲ್ಲಿ ಅಳವಡಿಸಲಾಗಿದೆ. ಅವುಗಳ ಕೇಂದ್ರೀಕೃತ ಮಾನಿಟರಿಂಗ್ ವ್ಯವಸ್ಥೆ ವಾರ್ ರೂಮ್ಲ್ಲಿ ನಡೆಯುತ್ತಿದೆ ಎಂದರು.
ನಿಯಮ ಉಲ್ಲಂಘಿಸುವವರು, ಕ್ವಾರಂಟೈನ್ ಸೆಂಟರ್, ಆಸ್ಪತ್ರೆಗಳು, ಕೋವಿಡ್ ಸೋಂಕಿತರ ನಿವಾಸ, ಸ್ಥಳಗಳು ಮೊದಲಾದ ಮಾಹಿತಿಯನ್ನು ಜಿಪಿಎಸ್ ಮೂಲಕ ಸುಲಭವಾಗಿ ಗುರುತಿಸುವ ವ್ಯವಸ್ಥೆ ಇಲ್ಲಿದೆ ಎಂದು ವಿವರಿಸಿದರು.
ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹಮದ್, ಸ್ಮಾರ್ಟ್ ಸಿಟಿ ವಿಶೇಷಾಧಿಕಾರಿ ಎಸ್.ಎಚ್. ನರೇಗಲ್, ಬಿಆರ್ಟಿಎಸ್ ಅಧಿಕಾರಿ ಮಂಜುನಾಥ, ಇತರರು ಉಪಸ್ಥಿತರಿದ್ದರು.
ಸಚಿವರಿಂದ ಲಾಕ್ಡೌನ್ ಪರಿಶೀಲನೆ
ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಗುರುವಾರ ಅಧಿಕಾರಿಗಳೊಂದಿಗೆ ನಗರದೆಲ್ಲೆಡೆ ಸಂಚರಿಸಿ ಲಾಕ್ಡೌನ್ ಅನುಷ್ಠಾನದ ಕುರಿತು ಪರಿಶೀಲನೆ ಮಾಡಿದರು. ನಗರದ ಗೋಕುಲ ರಸ್ತೆ, ಅಕ್ಷಯ ಪಾರ್ಕ್, ಸಿದ್ಧಾರೂಢ ಮಠ ನಗರ, ಹೆಗ್ಗೇರಿ, ಇಂಡಿ ಪಂಪ್, ಹಳೇ ಹುಬ್ಬಳ್ಳಿ, ನ್ಯೂ ಇಂಗ್ಲಿಷ್ ಸ್ಕೂಲ್, ಚಿತ್ರಕಾರ ಓಣಿ, ದುರ್ಗದ ಬೈಲ್ನಲ್ಲಿ ಸಂಚರಿಸಿದರು. ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪೊಲೀಸ್ ಆಯುಕ್ತ ಆರ್. ದಿಲೀಪ ಹಾಗೂ ಸಿಬ್ಬಂದಿ ಇದ್ದರು.