ಮುಂಡಗೋಡ: ಏನಾದರೂ ನೆಪ ಮಾಡಿಕೊಂಡು ಪಟ್ಟಣದಲ್ಲಿ ಬೈಕ್ ಸವಾರರು, ವಾಹನ ಚಾಲಕರು ಮತ್ತು ಪಾದಚಾರಿಗಳು ತಿರುಗಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಪೊಲೀಸರು ಬುಧವಾರ ಲಾಕ್ಡೌನ್ ಉಲ್ಲಂಘಿಸಿದವರಿಗೆ ಬಸ್ಕಿ ಹೊಡೆಯಿಸಿ ಲಾಠಿ ರುಚಿ ತೋರಿಸಿದರು. 2-3 ದಿನಗಳಿಂದ ರಸ್ತೆಗಳಲ್ಲಿ ಜನ ಸಂಚಾರ ಮತ್ತು ವಾಹನಗಳ ಸಂಚಾರ ಹೆಚ್ಚಾಗಿದ್ದು ಈಗಾಗಲೆ ಮನೆ-ಮನೆಗಳಿಗೆ ದಿನಸಿ, ತರಕಾರಿ ಮತ್ತು ಇನ್ನಿತರ ಸಾಮಗ್ರಿಗಳ ವಿತರಣೆ ಮಾಡಲಾಗಿದೆ. ಆದರೆ, ಔಷಧ ಅಂಗಡಿ, ಆಸ್ಪತ್ರೆ ಮತ್ತು ಇನ್ನಿತರ ನೆಪ ಮಾಡಿಕೊಂಡು ಪಟ್ಟಣದಲ್ಲಿ ಜನರು ತಿರುಗಾಡುತ್ತಿದ್ದಾರೆ. ಪೊಲೀಸರು ಹಳ್ಳಿ ಹಾಗೂ ಬೇರೆ ಬೇರೆ ತಾಲೂಕುಗಳಿಂದ ಪಟ್ಟಣಕ್ಕೆ ಬರುತ್ತಿರುವ ವಾಹನಗಳನ್ನು ತಡೆದು ಸುಮಾರು 15ಕ್ಕೂ ಹೆಚ್ಚು ವಾಹನಗಳ ಮಾಲೀಕರಿಗೆ ದಂಡ ಹಾಕಿದ್ದಾರೆ. ಅಲ್ಲದೆ, ಹುಬ್ಬಳ್ಳಿಯಿಂದ ಶಿರಸಿ ಕಡೆಗೆ ತೆರಳುತ್ತಿದ್ದ ವಾಹನದ ಪ್ರಯಾಣಿಕರಿಗೆ ಪಿಎಸ್ಐ ಮೋಹಿನಿ ಶೆಟ್ಟಿ ಬಸ್ಕಿ ಹೊಡೆಯಿಸಿ ಲಾಠಿ ರುಚಿ ತೋರಿಸಿದ್ದಾರೆ.