ಲಕ್ಷ್ಮೇಶ್ವರ: ಕಳೆದ ಒಂದು ತಿಂಗಳು ಕಡಿಮೆಯಾಗಿದ್ದ ಕರೊನಾ ಸೋಂಕು ಇದೀಗ ಮತ್ತೆ ಭಯ ಮೂಡಿಸಿದೆ. ಪಟ್ಟಣದಲ್ಲಿ ಗುರುವಾರ ಒಂದು ಮತ್ತು ತಾಲೂಕಿನ ಕುಂದ್ರಳ್ಳಿ ತಾಂಡಾದಲ್ಲಿ ಶುಕ್ರವಾರ ಒಂದು ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕಿನಲ್ಲಿ ಕಳೆದೊಂದು ವಾರದಲ್ಲಿ 9 ಹೊಸ ಪ್ರಕರಣ ದೃಢಪಟ್ಟಿವೆ. ಆದರೆ, ಜನರಿಗೆ ಮಾತ್ರ ಯಾವುದೇ ಭಯವೇ ಇಲ್ಲ. ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಪಾಡುವುದು, ಸ್ಯಾನಿಟೈಸರ್, ಲಸಿಕೆ, ಚಿಕಿತ್ಸೆ ಮರೆತು ಕರೊನಾ ಮಾರ್ಗಸೂಚಿಗಳನ್ನು ಗಾಳಿಗೆ ತೂರಿದ್ದಾರೆ.
ಲಕ್ಷ್ಮೇಶ್ವರದ ಶುಕ್ರವಾರ ಸಂತೆ, ಮಾರುಕಟ್ಟೆಯಲ್ಲಿ ಹಬ್ಬದ ಖರೀದಿಗೆಂದು ನಿತ್ಯ ಸಾವಿರಾರು ಜನರು ಆಗಮಿಸುತ್ತಿದ್ದಾರೆ. ಹೋಟೆಲ್, ಬಟ್ಟೆ, ಕಿರಾಣಿ, ಆಭರಣ ಇತರ ಅಂಗಡಿಗಳಲ್ಲಿ ಜನರು ಸೇರುತ್ತಿದ್ದಾರೆ. ತೆರೆಮರೆಯಲ್ಲಿ ಹಬ್ಬ, ಉತ್ಸವ, ಸಂತೆ, ಸಮಾರಂಭ, ಮದುವೆ, ರಾಜಕೀಯ ಕಾರ್ಯಕ್ರಮಗಳು ನಡೆಯುತ್ತಿವೆ. ಅಲ್ಲಿ ಕೋವಿಡ್ ನಿಯಮಾವಳಿ ಪಾಲನೆಯಾಗುತ್ತಿಲ್ಲ. ತಾಲೂಕಿನಲ್ಲಿ ಕರೊನಾ ವೈರಸ್ನಿಂದ ಈವರೆಗೆ 44 ಸಾವು ಸಂಭವಿಸಿವೆ. 1350ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಈ ಬಗ್ಗೆ ಎಚ್ಚರಿಕೆ ಕ್ರಮ ಕೈಗೊಳ್ಳದ ಸರ್ಕಾರದ ಕ್ರಮದಿಂದ ಜಿಲ್ಲಾಡಳಿತ, ತಾಲೂಕಾಡಳಿತ, ಪುರಸಭೆ, ಪೊಲೀಸರೂ ಅಸಹಾಯಕತೆಯಿಂದ ಕೈಚೆಲ್ಲಿದ್ದಾರೆ. ಸ್ವಯಂ ಪ್ರೇರಿತರಾಗಿ ಆರೋಗ್ಯದತ್ತ ಕಾಳಜಿ ವಹಿಸಬೇಕಿದ್ದ ಜನತೆ ಸಂಪೂರ್ಣ ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಕ್ರಮಕ್ಕೆ ಆದೇಶಿಸಿದಾಗ ಮಾತ್ರ ಅಧಿಕಾರಿಗಳೂ ಎಚ್ಚ್ಚೆತ್ತುಕೊಳ್ಳುತ್ತಾರೆ. ಸರ್ಕಾರ ಜನರ ಪ್ರಾಣ ರಕ್ಷಣೆಗಾಗಿ ಶುಕ್ರವಾರ ರಾತ್ರಿ 9ರಿಂದ ಬೆಳಗ್ಗೆ 5 ರವರೆಗೆ ನೈಟ್ ಕರ್ಫ್ಯೂ ವಿಧಿಸಿ ಕಟ್ಟುನಿಟ್ಟಿನ ಆದೇಶ ನೀಡಿದೆ.
ಕೋವಿಡ್ 3ನೇ ಅಲೆಯ ಬಗ್ಗೆ ತಜ್ಞರು ಎಚ್ಚರಿಕೆ ನೀಡಿರುವ ಹಿನ್ನೆಲೆ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಜನತೆ ಸ್ವಯಂ ಪ್ರೇರಿತರಾಗಿ ಮುನ್ನೆಚ್ಚರಿಕೆ ಕ್ರಮ ವಿಧಿಸಿಕೊಳ್ಳಬೇಕು. ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸಬೇಕು. ಎಲ್ಲರೂ ತಪ್ಪದೇ ಲಸಿಕೆ ಹಾಕಿಸಿಕೊಳ್ಳಬೇಕು. ಸರ್ಕಾರ ವಿಧಿಸಿರುವ ನೈಟ್ ಕರ್ಫ್ಯೂ ಸಮರ್ಪಕವಾಗಿ ಜಾರಿಗೊಳ್ಳುವಂತೆ ಪುರಸಭೆ ಅಧಿಕಾರಿಗಳು, ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು.
| ಭ್ರಮರಾಂಬ ಗುಬ್ಬಿಶೆಟ್ಟಿ
ತಹಸೀಲ್ದಾರ್