ಹುಣಸೂರು: ಮಂಡ್ಯದಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿದ್ದ ಪ್ರತಿಭಟನೆಯನ್ನು ರಾಜ್ಯ ಸರ್ಕಾರ ಹತ್ತಿಕ್ಕಿರುವುದನ್ನು ಖಂಡಿಸಿ ತಾಲೂಕು ರೈತಸಂಘ ಮತ್ತು ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ, ರಸ್ತೆ ತಡೆ ನಡೆಸಲಾಯಿತು.
ನಗರದ ಸಂವಿಧಾನ ವೃತ್ತದ ಬಳಿ ಜಮಾಯಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ವಿರುದ್ಧ ಘೋಷಣೆಗಳನ್ನು ಕೂಗಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಕಬ್ಬು ಬೆಳೆ, ಹಾಲಿಗೆ ಉತ್ತಮ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ 52 ದಿನಗಳಿಂದ ಮಂಡ್ಯದಲ್ಲಿ ರೈತರು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದರು. ಕೇಂದ್ರದ ಗೃಹಸಚಿವ ಅಮಿತ್ ಷಾ ಮಂಡ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ರೈತರ ವಿರುದ್ಧ ರಾಜ್ಯ ಸರ್ಕಾರ ಬಲಪ್ರಯೋಗ ಮಾಡುವ ಮೂಲಕ ಹತ್ತಿಕ್ಕಿದೆ. ಶಾಮಿಯಾನ ಕಿತ್ತೆಸೆಯಲಾಗಿದೆ. ಇದು ಜನವಿರೋಧಿ ಸರ್ಕಾರವಾಗಿದೆ. ರಾಜ್ಯ ಸರ್ಕಾರ ಕೂಡಲೇ ತನ್ನ ತಪ್ಪಿಗೆ ಕ್ಷಮೆಯಾಚಿಸಿ ಬಂಧಿತ ರೈತರನ್ನು ಬಿಡುಗಡೆಗೊಳಿಸಬೇಕು. ರೈತರ ನ್ಯಾಯಯುತ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಅಮಿತ್ ಷಾ ಭೇಟಿ ವೇಳೆ ಕಪ್ಪುಬಾವುಟ ಪ್ರದರ್ಶಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ರಾಮೇಗೌಡ, ಮುಖಂಡರಾದ ಧನಂಜಯ, ಕಲ್ಲಹಳ್ಳಿ ವಿಷಕಂಠಪ್ಪ, ರಮೇಶ್, ನಿಲುವಾಗಿಲು ಪ್ರಭಾಕರ್, ಅರ್ಜುನ ಮೂಕನಹಳ್ಳಿ, ವಿಜಿ, ಜಯಣ್ಣ, ಸತೀಶ್ ಕಾಡನಕೊಪ್ಪಲು, ಆದಿಜಾಂಬವ ಸಂಘದ ಅಧ್ಯಕ್ಷ ಶಿವಣ್ಣ, ದಲಿತ ಸಂಘರ್ಷ ಸಮಿತಿಯ ರಾಮಕೃಷ್ಣ ಅತ್ತಿಕುಪ್ಪೆ, ರಾಜು ಚಿಕ್ಕಹುಣಸೂರು, ರಾಜು, ಸಿದ್ದೇಶ್ ಇತರರು ಇದ್ದರು.