ಮಡಿಕೇರಿ: ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಜಿಲ್ಲೆಯ ಇಬ್ಬರು ಶಾಸಕರು ಗುರುವಾರ ರಿಲ್ಯಾಕ್ಸ್ ಮೂಡ್ನಲ್ಲಿ ಕಾಲ ಕಳೆದರು.
ಸುಮಾರು 3 ತಿಂಗಳಿನಿಂದ ಬಿಡುವಿಲ್ಲದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಇವರು, ವೈಯಕ್ತಿಕ ಕೆಲಸ, ತೋಟದ ಕೆಲಸ, ಕುಟುಂಬದ ಜತೆ ಕಳೆಯಲು ಸಮಯ ಮೀಸಲಿಟ್ಟಿದ್ದರು.
ಮಡಿಕೇರಿಯ ಮನೆಯಲ್ಲಿ ಗಿಡಕ್ಕೆ ನೀರು ಹಾಕಿ, ಸಾಕು ನಾಯಿಗಳಾದ ರೂಬಿ, ಕ್ಯಾಂಡಿ, ಓರಿಯೊದೊಂದಿಗೆ ವಿರಾಜಪೇಟೆ ಶಾಸಕ ಬೋಪಯ್ಯ ಕಾಲ ಕಳೆದರು. ಈ ವೇಳೆ ಮಾತನಾಡಿದ ಅವರು, ನಾನು ಸಾಕಷ್ಟು ಚುನಾವಣೆ ಎದುರಿಸಿದ್ದೇನೆ. ಆದರೆ ಕೊಡಗಿನಲ್ಲಿ ಇಂತಹ ಚುನಾವಣೆ ಎಂದೂ ಕಂಡಿಲ್ಲ. ಚುನಾವಣೆಯಲ್ಲಿ ಹಣದ ಹೊಳೆ ಹರಿದಿದೆ. ಈ ಬಾರಿ ಕೊಡಗಿನಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.
ನಾವು ಅಭಿವೃದ್ಧಿಯ ಆಧಾರದಲ್ಲಿ ಮತ ಕೇಳಿದ್ದೇವೆ. ಎದುರು ಪಕ್ಷದವರು ಜಾತಿ ರಾಜಕಾರಣ ಮಾಡಿದ್ದಾರೆ. ಯಾರು ಕೂಡ ಗ್ರಾ.ಪಂ. ಚುನಾವಣೆಯಲ್ಲೂ ನಿಲ್ಲದ ಮಟ್ಟಿಗೆ ಇಲ್ಲಿನ ರಾಜಕೀಯ ತಂದಿದ್ದಾರೆ. ಸಾಮಾಜಿಕ ಕಳಕಳಿಯ ನಾಯಕರು ಮುಂದೆ ಕೊಡಗಿನಲ್ಲಿ ಬರಲು ಸಾಧ್ಯ ಇಲ್ಲ. ಕೊಡಗಿನಲ್ಲಿ ಮೊದಲ ಬಾರಿಗೆ ವ್ಯಾಪಾರೀಕರಣ ನಡೆದಿದೆ. ಬೆಂಗಳೂರು ಮತ್ತು ಹಾಸನ ರಾಜಕಾರಣವನ್ನು ಕೊಡಗಿನಲ್ಲಿ ತಂದು ಹಾಳು ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕೊಡಗಿನಲ್ಲಿ ಯಾವುದೇ ಹಣಬಲ ನಡೆಯುವುದಿಲ್ಲ ಸಮೀಕ್ಷೆಗಳ ಬಗ್ಗೆ ನಾನು ಏನೂ ಹೇಳುವುದಿಲ್ಲ ಎಂದು ಬೋಪಯ್ಯ ಪ್ರತಿಕ್ರಿಯಿಸಿದರು.
ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ತೋಟದ ಮನೆಯಲ್ಲೆ ವಿಹರಿಸುತ್ತಾ ರಿಲ್ಯಾಕ್ಸ್ ಮಾಡಿದರು. ತೋಟದ ಕೆಲಸದಲ್ಲೂ ತೊಡಗಿಸಿಕೊಂಡರು. ಕೆಲಸಗಾರರೊಂದಿಗೆ ತೋಟದ ಕೆಲಸ ವೀಕ್ಷಿಸಿದರು. ಸ್ವತಃ ತಾವೇ ಪಿಕಪ್ ವಾಹನ ಓಡಿಸಿಕೊಂಡು ತೋಟ ವೀಕ್ಷಣೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಕೊಡಗಿನಲ್ಲಿ ಈ ಬಾರಿ ಸೂಟ್ಕೇಸ್ ರಾಜಕಾರಣ ನಡೆದಿದೆ. ಸ್ಥಳೀಯ ಕಾಂಗ್ರೆಸ್ ನಾಯಕರನ್ನು ಕಡೆಗಣಿಸಿರುವ ಬಗ್ಗೆ ಜನರಿಗೆ ನೋವಿದೆ. ಇದು ನನ್ನದು 7ನೇ ಚುನಾವಣೆ 5 ಬಾರಿ ಗೆದ್ದಿದ್ದೇನೆ. 6ನೇ ಬಾರಿಯೂ ಗೆಲ್ಲುವ ವಿಶ್ವಾಸ ಇದೆ ಎಂದರು.