ಬೋರಗಾಂವ: ಬ್ರಿಟಿಷರ ವಿರುದ್ಧ ಹೋರಾಡಿದ ವೀರರಾಣಿ ಕಿತ್ತೂರು ರಾಣಿ ಚನ್ನಮ್ಮಳ ಸಾಹಸ ಎಲ್ಲರಿಗೂ ಮಾದರಿ ಎಂದು ಯುವ ಮುಖಂಡ ಉತ್ತಮ ಪಾಟೀಲ ಹೇಳಿದರು.
ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಮಂಡಳ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಸಂಗೊಳ್ಳಿ ರಾಯಣ್ಣರ 224ನೇ ಜಯಂತಿಯಲ್ಲಿ ಮಾತನಾಡಿದ ಅವರು, ರಾಣಿ ಚನ್ನಮ್ಮಳ ಧೈರ್ಯ ಇಂದಿನ ಮಹಿಳೆಯರು ಅಳವಡಿಸಿಕೊಳ್ಳಬೇಕು ಎಂದರು. ಜೀವನದಲ್ಲಿ ಪ್ರಭಲವಾಗಿ ಬೆಳೆದು ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಸಂಗೊಳ್ಳಿ ರಾಯಣ್ಣ, ಸ್ವಾತಂತ್ರ್ಯ ನಾಡಿನ ಕನಸು ಕಟ್ಟಿಕೊಂಡೆ ಹುತಾತ್ಮರಾದರು. ರಾಯಣ್ಣನ ಆದರ್ಶ ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸ್ವಾತಂತ್ರ್ಯಕ್ಕಾಗಿ ಮಡಿದ ಮಹಾಪುರುಷರ ಜಯಂತಿ ಆಚರಿಸಿ, ಅವರ ತತ್ವಾದರ್ಶ ಮನೆ ಮನೆಗೆ ತಲುಪಿಸುವ ಕಾರ್ಯ ಮಾಡಬೇಕಿದೆ. ಇಂತಹ ಕಾರ್ಯಕ್ಕೆ ಅರಿಹಂತ ಉದ್ಯೋಗ ಸಮೂಹದಿಂದ ನೆರವು ನೀಡಲಾಗುವುದು ಎಂದರು. ಪಪಂ ಸದಸ್ಯ ಅಭಯಕುಮಾರ ಮಗದುಮ್ಮ, ಪ್ರದಿಪ ಮಾಳಿ, ದಿಗಂಬರ ಕಾಂಬಳೆ, ಪಿಂಟು ಕಾಂಬಳೆ, ಅಶ್ವಿನಿ ಪವಾರ, ರೋಹಿತ ಪಾಟೀಲ, ವರ್ಷಾ ಮನಗುತ್ತೆ, ರುಕ್ಸಾನಾ ಅಫರಾಜ್, ಅನಿಲ ಗುರವ, ಸಂಜಯ ಐದಮಾಳೆ, ಸಂಗೀತಾ ಶಿಂಗೆ, ಮಾಣಿಕ ಕುಂಬಾರ, ಅಶೋಕ ನೇಜೆ, ಸುವರ್ಣಾ ಸೋಬಾನೆ, ಶೋಭಾ ಹವಲೆ ಇತರರಿದ್ದರು.