ಶಿವಮೊಗ್ಗ: ರಾಜ್ಯದಲ್ಲಿ ಕರೊನಾ ತಾಂಡವವಾಡುತ್ತಿದೆ. ಸರ್ಕಾರ ಇದ್ದೂ ಇಲ್ಲದಂತಾಗಿದ್ದು ಸಿಎಂ ಬಿ.ಎಸ್.ಯಡಿಯೂರಪ್ಪ ಅಧಿಕಾರ ಉಳಿಸಿಕೊಳ್ಳುವ ಜತೆಗೆ ಸಚಿವ ಸಂಪುಟ ವಿಸ್ತರಣೆ ಹಾಗೂ ಎಂಎಲ್ಸಿಗಳ ನಾಮನಿರ್ದೇಶನ ಚಟುವಟಿಕೆಯಲ್ಲಿ ತಲ್ಲೀನರಾಗಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ವ್ಯಂಗ್ಯವಾಡಿದರು.
ಕರೊನಾ ತಡೆಗೆ ರಾಜ್ಯ ಸರ್ಕಾರ ವಿಫಲವಾಗಿದೆ. ಪರಿಕರಗಳ ಖರೀದಿಯಲ್ಲಿ ಗೋಲ್ಮಾಲ್ ನಡೆದಿದ್ದು ಸರ್ಕಾರ ಸಾರ್ವಜನಿಕರ ಹಣ ಲೂಟಿ ಮಾಡಲು ಹೊರಟಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಜಿಲ್ಲೆಯಲ್ಲೂ ಕರೊನಾ ಸೋಂಕಿನ ಪ್ರಮಾಣ ದಿನೇದಿನೆ ಹೆಚ್ಚಾಗುತ್ತಿದೆ. ಜಿಲ್ಲಾ ಉಸ್ತುವರಿ ಸಚಿವರು ಆಧಾರ್ ಕಾರ್ಡ್ ಪಡೆದು ಆಯುರ್ವೆದಿಕ್ ಔಷಧ ವಿತರಣೆಯಲ್ಲಿ ಬ್ಯುಸಿ ಆಗಿದ್ದಾರೆ. ಆದರೆ ಮೆಗ್ಗಾನ್ನಲ್ಲಿ ವೆಂಟಿಲೇಟರ್ಗೆ ಹೋದ ಸೋಂಕಿತರು ಗುಣಮುಖರಾಗಿ ಬರುವುದೇ ಅನುಮಾನವಾಗಿದ್ದು ಸೂಕ್ತ ವ್ಯವಸ್ಥೆಗಳೇ ಇಲ್ಲದೇ ಮೆಗ್ಗಾನ್ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ ಎಂದು ಆರೋಪಿಸಿದರು.
ಉಸ್ತುವಾರಿ ಸಚಿವ ಈಶ್ವರಪ್ಪ ಕೇವಲ ಶಿವಮೊಗ್ಗಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಜಿಲ್ಲೆಯ ಇತರೆ ತಾಲೂಕುಗಳತ್ತ ಮುಖ ಮಾಡುತ್ತಿಲ್ಲ. ಮೆಗ್ಗಾನ್ ಅವ್ಯವಸ್ಥೆ ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಬೀದಿಗಿಳಿದು ಹೋರಾಡಲಿದೆ ಎಂದು ಎಚ್ಚರಿಕೆ ನೀಡಿದರು.
ಮುಖಂಡರಾದ ಎಚ್.ಸಿ.ಯೋಗೀಶ್, ವಿಶ್ವನಾಥ ಕಾಶಿ, ಯುಮುನಾ ರಂಗೇಗೌಡ, ಆರ್.ಸಿ.ನಾಯ್್ಕ ಚಂದ್ರಭೂಪಾಲ್ ಇದ್ದರು.
ಶಿವಮೊಗ್ಗದಲ್ಲಿ ಆಂಬುಲೆನ್ಸ್ಗಳೇ ಇಲ್ಲ: ಶಿವಮೊಗ್ಗದಲ್ಲಿ ಆಂಬುಲೆನ್ಸ್ಗಳಿಲ್ಲ. 10-12 ರೋಗಿಗಳನ್ನು ಒಂದು ಆಂಬುಲೆನ್ಸ್ನಲ್ಲಿ ತುಂಬಿಕೊಂಡು ಹೋಗಲಾಗುತ್ತಿದೆ. ಇದು ಅತ್ಯಂತ ಅಪಾಯಕಾರಿ. ಕರೊನಾ ಕೇರ್ ಸೆಂಟರ್ಗಳಲ್ಲಿ ಕುಡಿಯುವ ನೀರಿಲ್ಲ. ಬಿಸಿ ನೀರು ಬರುತ್ತಿಲ್ಲ. ಸೋಂಕಿತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಷ್ಟಾದರೂ ಉಸ್ತುವಾರಿ ಸಚಿವರು ಗಮನಹರಿಸುತ್ತಿಲ್ಲ ಎಂದು ಸುಂದರೇಶ್ ದೂರಿದರು.
ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿ, ಮಾಸ್ಕ್ ಧರಿಸದೆ ಬರುವ ಸಾರ್ವಜನಿಕರಿಂದ ದಂಡ ಸಂಗ್ರಹಿಸುವ ಜತೆಗೆ ಸ್ಥಳದಲ್ಲಿಯೇ ಮಾಸ್ಕ್ ನೀಡುವಂತಾಗಬೇಕು ಎಂದರು.
ಶಿವಮೊಗ್ಗಕ್ಕೆ ಸಿದ್ದರಾಮಯ್ಯ: ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆ.4ರಂದು ಶಿವಮೊಗ್ಗಕ್ಕೆ ಆಗಮಿಸಲಿದ್ದು, ಬೆಳಗ್ಗೆ 11ಕ್ಕೆ ಲಗಾನ್ ಮಂದಿರದಲ್ಲಿ ಮಾಧ್ಯಮ ಸಂವಾದದಲ್ಲಿ ಪಾಲ್ಗೊಳ್ಳುವರು ಎಂದು ಸುಂದರೇಶ್ ತಿಳಿಸಿದರು.
ಸಚಿವ ಕೆ.ಎಸ್.ಈಶ್ವರಪ್ಪ ಅವರು ಆಯುರ್ವೆದ ಕಿಟ್ ವಿತರಣೆಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದ್ದಾರೆ. ಆಧಾರ್ ನೀಡಲೇಬೇಕೆಂದಿದ್ದರೆ ಕಿಟ್ ವಿತರಣೆ ನಂತರ ಪಡೆಯಿರಿ. ಕಿಟ್ ವಿತರಣೆ ವೇಳೆ ಕಡ್ಡಾಯಗೊಳಿಸಿರುವುದು ಸರಿಯಲ್ಲ.
| ಎಚ್.ಎಸ್.ಸುಂದರೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ