ಧಾರವಾಡ: ರಾಷ್ಟ್ರೀಯ ಯುವ ಜನೋತ್ಸವ ಅಂಗವಾಗಿ ಕರ್ನಾಟಕ ಕಾಲೇಜು ಆವರಣದ ಸೃಜನಾ ರಂಗ ಮಂದಿರದಲ್ಲಿ ನಡೆದಿರುವ ಜಾನಪದ ನೃತ್ಯ ವೈಭವ ಭಾರತದ ವೈವಿದ್ಯತೆಯನ್ನು ಕಣ್ಮುಂದೆ ತಂದಿತು.
ದೇಶದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳ ಕಲಾ ತಂಡಗಳು ಆಯಾ ಪ್ರದೇಶದ ಜನಜೀವನ, ಕಲೆ, ಸಂಸ್ಕೃತಿಯನ್ನು ಹಾಡು ನೃತ್ಯಗಳೊಂದಿಗೆ ಕಟ್ಟಿಕೊಡುವ ಮೂಲಕ ವಿವಿಧತೆಯಲ್ಲಿ ಏಕತೆಯ ಮಂತ್ರ ಜಪಿಸುವ ಭಾರತೀಯತೆ ಪ್ರದರ್ಶಿಸಿದರು.
ಮಧ್ಯಪ್ರದೇಶ, ಪಂಜಾಬ, ಹರಿಯಾಣ, ಬಿಹಾರ್, ದಾದರ್ ಹಾಗೂ ನಗರ ಹವೇಲಿ, ಲಕ್ಷದ್ವೀಪ, ಮೇಘಾಲಯ ಮುಂತಾದೆಡೆಯ ಕಲಾ ತಂಡಗಳು ಕಿಕ್ಕಿರಿದು ತುಂಬಿದ್ದ ಸಭಾಗೃಹದಲ್ಲಿ ಪ್ರದರ್ಶನ ನೀಡಿದರು. ಮದುವೆ ಸಂಪ್ರದಾಯ, ರೈತರ ಸುಗ್ಗಿ ಹಬ್ಬ, ಹೋಳಿ ಹಬ್ಬದ ಹಿನ್ನೆಲೆಗಳನ್ನು ನೃತ್ಯಗಳ ಮೂಲಕ ತೋರಿಸಿ ಚಪ್ಪಾಳೆ ಗಿಟ್ಟಿಸಿದರು.
ವಿವಿಧ ವಾದ್ಯಮೇಳ, ಕಹಳೆ ಶಬ್ದ, ವೇದಿಕೆಯಲ್ಲಿ ನೃತ್ಯ ತಂಡದ ಕುಣಿತಕ್ಕೆ ಸಭೀಕರು ಶಿಳ್ಳೆ ಹಾಕಿ ಹುರಿದುಂಬಿಸಿದರು.
ಬಿಹಾರದ ಲೋಕರಂಗ ಜಾಣಪದ ತಂಡ ಪ್ರಸ್ತುತ ಪಡಿಸಿದ ಹೋಲಿ ನೃತ್ಯವು ಇಡೀ ವೇದಿಕೆಯನ್ನು ರಂಗೇರಿಸಿತು. ಲಕ್ಷದ್ವೀಪದ ಪೈಟಕಿ ನೃತ್ಯ, ದಾದರ ಹಾಗೂ ನಗರ ಹವೇಲಿ ತಂಡದ ಸಾಂಪ್ರದಾಯಿಕ ನೃತ್ಯವು ಗಮನ ಸೆಳೆಯಿತು.