More

    ಯುವಜನರಿಗೆ ಬೇಕು ಮಾರ್ಗದರ್ಶನ – ರಂಭಾಪುರಿ ಜಗದ್ಗುರು

    ಬೆಳಗಾವಿ: ನಮ್ಮ ಪೂರ್ವಜರು ಉಳಿಸಿ ಬೆಳೆಸಿಕೊಂಡು ಬಂದಿರುವ ಧಾರ್ಮಿಕ ವಿಚಾರಧಾರೆಗಳು, ಸಂಸ್ಕೃತಿಯನ್ನು ಇಂದಿನ ಆಧುನಿಕ ಯುಗದ ಯುವಜನಾಂಗ ನಿರ್ಲಕ್ಷಿಸುತ್ತಿದ್ದಾರೆ. ದೇಶ, ಧರ್ಮದ ಬಗೆಗಿನ ಸ್ವಾಭಿಮಾನ ಯಾವತ್ತೂ ಕುಂಠಿತವಾಗಬಾರದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು.

    ಬೆಳಗಾವಿ ವಿನಾಯಕ ನಗರದಲ್ಲಿರುವ ಹುಕ್ಕೇರಿ ಹಿರೇಮಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪಾದಪೂಜೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

    ವೈರತ್ವ ಬೇಡ: ಇಂದಿನ ಕಾಲಘಟ್ಟದಲ್ಲಿ ಎಲ್ಲೆಡೆ ಅಶಾಂತಿ, ಸಂಘರ್ಷ, ಸಮಸ್ಯೆಗಳು ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಧಾರ್ಮಿಕ ಪರಂಪರೆ, ವಿಚಾರಧಾರೆ, ಸಂಸ್ಕೃತಿ ಉಳಿಸಿ ಬೆಳಸುವ ನಿಟ್ಟಿನಲ್ಲಿ ಯುವ ಜನಾಂಗಕ್ಕೆ ಅಗತ್ಯ ಮಾರ್ಗದರ್ಶನ ನೀಡಬೇಕಿದೆ. ನಮ್ಮ ನಮ್ಮಲ್ಲಿರುವ ವೈರತ್ವ ದೂರ ಮಾಡಿ ಆರೋಗ್ಯವಂತ ಸಮಾಜ ಕಟ್ಟಲು ಶ್ರಮಿಸಬೇಕಿದೆ. ಎಲ್ಲರೂ ಸತ್ಯದ ತಳಹದಿಯ ಮೇಲೆ ಜೀವನ ರೂಪಿಸಿಕೊಳ್ಳಬೇಕು. ಸಮಾಜದಲ್ಲಿ ಸುಳ್ಳು ಹೆಚ್ಚಾಗುತ್ತಿದ್ದು, ಧರ್ಮದ ದಾರಿಯಲ್ಲಿ ನಡೆದಾಗ ಸತ್ಯ ಗಟ್ಟಿಯಾಗಿ ಬೆಳೆಯುತ್ತದೆ ಎಂದರು.

    ಕಾಲ ಬದಲಾದಂತೆ ಪೀಠಗಳು ಕೂಡ ಧಾರ್ಮಿಕ ಕಾರ್ಯಗಳ ಜತೆಗೆ ಜನರಲ್ಲಿ ಅಗತ್ಯ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿವೆ. ವಿಜ್ಞಾನ ಮನುಷ್ಯರ ಕಲ್ಯಾಣಕ್ಕೆ ಬಳಕೆಯಾಗಬೇಕೇ ಹೊರತು ವಿನಾಶಕ್ಕೆ ಕಾರಣವಾಗಬಾರದು. ಧರ್ಮದ ಜತೆಗೇ ವಿಜ್ಞಾನವೂ ಬೆಳೆಯಬೇಕು ಎಂದು ರಂಭಾಪುರಿ ಶ್ರೀಗಳು ತಿಳಿಸಿದರು.
    ಮಠಕ್ಕೆ ದೇಣಿಗೆ: ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಸಮಾಜಮುಖಿ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಎಲ್ಲ ಸಮುದಾಯದ ಜನರಿಗೆ ಒಳಿತಾಗಲೆಂದು ನಿರ್ಮಿಸುತ್ತಿರುವ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರಕ್ಕೆ ಶ್ರೀ ರಂಭಾಪುರಿ ಪೀಠದಿಂದ 1,00,008 ರೂ. ದೇಣಿಗೆ ನೀಡಲಾಗುವುದು ಎಂದು ರಂಭಾಪುರಿ ಶ್ರೀಗಳು ತಿಳಿಸಿದರು.

    ಮಠದಿಂದ ಜನಪರ ಕಾರ್ಯ: ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರಂಭಾಪುರಿ ಜಗದ್ಗುರುಗಳು ನಮಗೆ ಗುರುಗಳು. ಅವರ ಆದರ್ಶ, ತತ್ತ್ವ ಸಿದ್ಧಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜನಪರ ಕಾರ್ಯ ಮಾಡುತ್ತಿದ್ದೇವೆ. ಗುರುವನ್ನು ನಂಬಿ ನಡೆದರೆ ಎಲ್ಲವೂ ಸಾಧ್ಯ ಎಂದರು. ವಿಆರ್‌ಎಲ್ ಸಮೂಹ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರು ಮಠಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದರು. ಉದ್ಯಮಿ ಎನ್.ಜಿ. ಶಿವಕುಮಾರ, ಆನಂದ ಗಡ್ಡದೇವರಮಠ, ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ, ಮಾಹಿತಿ ಹಕ್ಕು ಆಯುಕ್ತೆ ಗೀತಾ ಇತರರು ಇದ್ದರು.

    ವಿಜಯವಾಣಿ ಮೂಲಕ ಜನಜಾಗೃತಿ: ಕೆಲ ವರ್ಷಗಳಿಂದ ವೀರಶೈವ ಸಮಗ್ರ ಧರ್ಮವನ್ನು ಲಿಂಗಾಯತ ಎಂದು ಒಡೆಯುವ ಪ್ರಯತ್ನ ನಡೆದಿದೆ. ಇದಕ್ಕೆ ಕೆಲ ಸ್ವಾಮೀಜಿಗಳೂ ಕುಮ್ಮಕ್ಕು ನೀಡುತ್ತಿದ್ದು, ರಾಜಕಾರಣಿಗಳೂ ಬೆಂಬಲ ನೀಡುತ್ತಿದ್ದಾರೆ. ರಾಜಕೀಯದಲ್ಲಿ ಧರ್ಮ ಇರಬೇಕು. ಆದರೆ, ಯಾವತ್ತೂ ಧರ್ಮದಲ್ಲಿ ರಾಜಕೀಯ ಬರಬಾರದು. ಆದರೆ, ಪಂಚಪೀಠಗಳಿಂದ ದೊಡ್ಡ ಮಟ್ಟದ ಹೋರಾಟ ಮಾಡಿ ವೀರಶೈವ ಲಿಂಗಾಯತ ಒಂದೇ ಧರ್ಮ, ಬೇರೆ ಬೇರೆ ಅಲ್ಲ ಎಂದು ಜಾಗೃತಿ ಮೂಡಿಸಲಾಯಿತು.

    ಇಂತಹ ಸಂದರ್ಭದಲ್ಲಿ ವಿಆರ್‌ಎಲ್ ಸಮೂಹ ಸಂಸ್ಥೆಯ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರು ತಮ್ಮ ‘ವಿಜಯವಾಣಿ’ ದಿನಪತ್ರಿಕೆಯ ಮುಖಾಂತರ ವಿದ್ವಾಂಸರು, ಸಾಹಿತಿಗಳು ಸೇರಿದಂತೆ ಜ್ಞಾನಿಗಳಿಂದ ವೀರಶೈವ ಧರ್ಮದ ಕುರಿತಾಗಿ ನಿರಂತರವಾಗಿ ಮಾಹಿತಿ, ಅಂಕಣಗಳನ್ನು ಪ್ರಕಟಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು. ಇದು ವೀರಶೈವ ಸಮಾಜ ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು ಎಂದು ರಂಭಾಪುರಿ ಶ್ರೀ ಮೆಚ್ಚುಗೆ ವ್ಯಕ್ತಪಡಿಸಿದರು.

    ವೀರಶೈವರಲ್ಲಿ ಬೇಕಿದೆ ಒಗ್ಗಟ್ಟಿನ ಬಲ: ವಿಆರ್‌ಎಲ್ ಸಮೂಹ ಸಂಸ್ಥೆಯ ಚೇರ್ಮನ್ ಡಾ.ವಿಜಯ ಸಂಕೇಶ್ವರ ಮಾತನಾಡಿ, ಗುರು-ಹಿರಿಯರು, ಸ್ವಾಮೀಜಿಗಳ ಆಶೀರ್ವಾದ ಹಾಗೂ ಸಿಬ್ಬಂದಿಯ ಪ್ರಾಮಾಣಿಕ ಕೆಲಸದಿಂದ ನಮ್ಮ ಸಂಸ್ಥೆ ದೊಡ್ಡದಾಗಿ ಬೆಳೆದಿದೆ. ಆಷಾಢ ಮಾಸದಲ್ಲಿ ಎರಡು ಬಾರಿ ರಂಭಾಪುರಿ ಶ್ರೀಗಳ ದರ್ಶನ ಭಾಗ್ಯ ಸಿಕ್ಕಿದೆ. ಧಾರ್ಮಿಕ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು. ರಾಜ್ಯ ರಾಜಕೀಯದ ಪ್ರಸಕ್ತ ವಿದ್ಯಮಾನದ ಬಗ್ಗೆ ನಾನೇನೂ ಹೆಚ್ಚಿಗೆ ಮಾತನಾಡುವುದಿಲ್ಲ. ಭಕ್ತಿಯ ಜತೆಗೆ ವೀರಶೈವರಲ್ಲಿ ಒಗ್ಗಟ್ಟಿನ ಅವಶ್ಯಕತೆ ಇದೆ.

    ಇಲ್ಲದಿದ್ದರೆ ನಾವೆಲ್ಲ ಅಧೋಗತಿ ಕಾಣಬೇಕಾಗುತ್ತದೆ ಎನ್ನುವುದಕ್ಕೆ ಎರಡು ದಿನದಿಂದ ರಾಜ್ಯ ರಾಜಕಾರಣದಲ್ಲಿನ ಘಟನೆಗಳೇ ಸಾಕ್ಷಿ. ನಾವೆಲ್ಲ ಒಟ್ಟಿಗಿದ್ದರೆ ಮಾತ್ರ ನಮ್ಮ ಸಮಾಜಕ್ಕೆ ಒಳ್ಳೆಯ ಭವಿಷ್ಯ ಇದೆ ಎಂದರು. ಹುಕ್ಕೇರಿ ಹಿರೇಮಠವು ಜನಪರ ಕಾರ್ಯಗಳಿಂದಲೇ ನಾಡಿನ ಗಮನ ಸೆಳೆಯುತ್ತಿದೆ. ಅವರೊಂದಿಗೆ ನಮ್ಮ ಸಮಾಜ ಸದಾ ಇರುತ್ತದೆ. ಹಿರೇಮಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರ ನಿರ್ಮಾಣ ಸೇರಿದಂತೆ ವಿವಿಧ ಕೆಲಸ ಕೈಗೊಂಡಿರುವುದು ಸಂತಸದ ಸಂಗತಿ. ಈ ಎಲ್ಲ ಕಾರ್ಯಗಳು ಭವಿಷ್ಯದ ದಿನಗಳಲ್ಲಿ ಸಮಾಜಕ್ಕೆ ಒಳ್ಳೆಯ ಬುನಾದಿಯಾಗಲಿದೆ. ಗುರು ಹಾಗೂ ಮಠಕ್ಕೆ ಎಲ್ಲರೂ ಸಹಾಯ ಮಾಡೋಣ ಎಂದು ಹೇಳಿದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts