ಮುಳಬಾಗಿಲು: ಸಾವಾನ್ಯ ವಿಭಾಗದಲ್ಲೂ ಅವಕಾಶವಿದ್ದು, ಇಡಬ್ಲುೃಎಸ್ನಲ್ಲೂ ಸ್ಥಳಾವಕಾಶ ಒದಗಿದರೆ ಐಎಎಸ್ಗೆ ಆಯ್ಕೆಯಾಗುವ ವಿಶ್ವಾಸವಿದೆ. ಇದಲ್ಲದೆ ಐಎಸ್ಎಫ್, ಐಪಿಎಸ್ ಸೇರಿ ಮತ್ತಿತರ ವಿಭಾಗಗಳಲ್ಲೂ ಸೇವೆ ಸಲ್ಲಿಸುವ ಆಸೆ ಇದೆ ಎನ್ನುತ್ತಾರೆ ಯುಪಿಎಸ್ಸಿಯಲ್ಲಿ 545ನೇ ರ್ಯಾಂಕ್ ಪಡೆದಿರುವ ಕಪ್ಪಲಮಡಗು ಗ್ರಾಮದ ಕೆ.ಆರ್.ಭರತ್.
ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಪದವೀಧರ ಸಹಾಯಕ ಕೆ.ರುನಾಥರಾವ್, ವಾಸವಿ ದಂಪತಿ ಪುತ್ರ ಭರತ್ 5ನೇ ಪ್ರಯತ್ನದಲ್ಲಿ ಈ ಸಾಧನೆ ಮಾಡಿದ್ದು, ಸರ್ಕಾರಿ ಸೇವೆ ಸಲ್ಲಿಸುವ ಅವಕಾಶ ಸದುಪಯೋಗ ವಾಡಿಕೊಂಡು ದೇಶ ಸೇವೆ ಮತ್ತು ಜನಸೇವೆ ಮಾಡಲು ಶ್ರಮಿಸುತ್ತೇನೆ ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ.
ಮುಳಬಾಗಿಲಿನ ಲೂರ್ದು ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಸೇಂಟ್ ಆನ್ಸ್ ಶಾಲೆಯಲ್ಲಿ ಪ್ರೌಢಶಿಕ್ಷಣ, ಕೋಲಾರದ ಸಹ್ಯಾದ್ರಿ ಕಾಲೇಜಿನಲ್ಲಿ ಪಿಯು ಮತ್ತು ಬೆಂಗಳೂರಿನ ದಯಾನಂದ ಸಾಗರ್ ಇಂಜಿನಿಯರ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ನಲ್ಲಿ ಬಿಇ ಪದವಿ ಪಡೆದಿದ್ದು, ಬೆಂಗಳೂರಿನಲ್ಲಿದ್ದುಕೊಂಡೇ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಿದ್ದರು.
ಬೆಂಗಳೂರಿನಲ್ಲಿ 2019 ಜೂನ್ನಲ್ಲಿ ಪ್ರಿಲಿಮಿನರಿ, 2019 ಸೆಪ್ಟೆಂಬರ್ನಲ್ಲಿ ಮೇನ್ಸ್ ಪರೀಕ್ಷೆ ಬರೆದಿದ್ದು, 2020ರ ಫೆಬ್ರವರಿ 19ರಂದು ದೆಹಲಿಯಲ್ಲಿ ಸಂದರ್ಶನಕ್ಕೆ ಹಾಜರಾಗಿದ್ದರು. ಎಸ್ಸೆಸ್ಸೆಲ್ಸಿ ಶೇ.91, ಪಿಯು ಶೇ.88, ಇಂಜಿನಿಯರಿಂಗ್ ಶೇ.73 ಫಲಿತಾಂಶ ಪಡೆದಿದ್ದಾರೆ.
ತಂದೆ ಕೆ.ರುನಾಥರಾವ್ ‘ಮಗನ ಸಾಧನೆ ಬಗ್ಗೆ ಹೆಮ್ಮೆ ಉಂಟಾಗಿದೆ. ಸಾಧಾರಣ ಉದ್ಯೋಗಿಯ ಮಗ ಯುಪಿಎಸ್ಸಿನಲ್ಲಿ ರ್ಯಾಂಕ್ ಪಡೆದಿರುವುದು ಸಂತಸದ ವಿಷಯ’ ಎಂದು ತಿಳಿಸಿದ್ದಾರೆ. ತಾಯಿ ವಾಸವಿ ಗೃಹಿಣಿಯಾಗಿದ್ದಾರೆ.