ನವಲಗುಂದ: ಕರೊನಾ ಕರ್ಫ್ಯ ಹಿನ್ನೆಲೆಯಲ್ಲಿ ವಾರದಿಂದ ಊಟೋಪಚಾರವಿಲ್ಲದೆ ಅಸ್ವಸ್ಥಳಾಗಿದ್ದ ವೃದ್ಧೆಯನ್ನು ತಾಲೂಕಾಡಳಿತದ ಅಧಿಕಾರಿಗಳು ರಕ್ಷಿಸಿ ಮಾನವೀಯತೆ ಮೆರೆದ ಘಟನೆ ತಾಲೂಕಿನ ಯಮನೂರ ಗ್ರಾಮದಲ್ಲಿ ಬುಧವಾರ ನಡೆದಿದೆ.
ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನವಳಾದ ಈ ವೃದ್ಧೆ, ಯಮನೂರ ಚಾಂಗದೇವರ ಜಾತ್ರೆಗೆ ಕುಟುಂಬಸ್ಥರ ಜತೆಗೆ ಆಗಮಿಸಿದ್ದಳು. ಜಾತ್ರೆ ಮುಗಿಸಿಕೊಂಡ ಬಳಿಕ ಕುಟುಂಬಸ್ಥರ ಜತೆಗಿನ ಆಂತರಿಕ ಕಲಹದಿಂದಾಗಿ ಅವರೊಂದಿಗೆ ಸವದತ್ತಿಗೆ ಹೋಗದೇ ಯಮನೂರ ಗ್ರಾಮದ ಧರ್ಮಶಾಲೆಯಲ್ಲೇ ಉಳಿದುಕೊಂಡಳು. ಅಷ್ಟರಲ್ಲಿ ಲಾಕ್ಡೌನ್ ಘೊಷಣೆಯಿಂದಾಗಿ ಒಂದು ವಾರದಿಂದ ಅನ್ನ, ನೀರು, ಉಪಚಾರವಿಲ್ಲದೇ ಅಸ್ವಸ್ಥಳಾಗಿದ್ದಳು. ಈಕೆಯ ಸ್ಥಿತಿಯನ್ನು ಕಂಡ ಗ್ರಾಮಸ್ಥರು ತಾಲೂಕಾಡಳಿತಕ್ಕೆ ಮಾಹಿತಿ ನೀಡಿದರು. ಗ್ರಾಮಕ್ಕೆ ಆಗಮಿಸಿದ ನವಲಗುಂದ ತಾ.ಪಂ. ಇಒ ಪವಿತ್ರಾ ಪಾಟೀಲ, ಪಿಎಸ್ಐ ಜಯಪಾಲ ಪಾಟೀಲ, ತಹಸೀಲ್ದಾರ್ ನವೀನ ಹುಲ್ಲೂರ, ಗ್ರಾಪಂ ಅಧಿಕಾರಿಗಳು ವೃದ್ಧೆಯನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ತಾಲೂಕು ವೈದ್ಯಾಧಿಕಾರಿಗಳಿಂದ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಉಪಚರಿಸಿದ್ದಾರೆ. ಸದ್ಯ ವೃದ್ಧೆಯ ಆರೋಗ್ಯ ಸ್ಥಿರವಾಗಿದ್ದು, ಗುಣಮುಖವಾಗಿದ್ದಾಳೆ.
ಬಿಸಿಎಂ ಹಾಸ್ಟೆಲ್ನಲ್ಲಿ ಊಟೋಪಚಾರ: ಕರೊನಾ ಹಿನ್ನೆಲೆಯಲ್ಲಿ ವೃದ್ಧೆಗೆ ನವಲಗುಂದ ಬಿಸಿಎಂ ಹಾಸ್ಟೆಲ್ನಲ್ಲಿ ತಾತ್ಕಾಲಿಕವಾಗಿ ಉಳಿದುಕೊಳ್ಳುಲು, ಊಟ, ಉಪಚಾರದ ವ್ಯವಸ್ಥೆ ಮಾಡಲಾಗಿದೆ. ವೃದ್ಧೆಯ ಮನೆಯವರನ್ನು ದೂರವಾಣಿ ಮೂಲಕ ಸಂರ್ಪಸಿ ಮನೆಗೆ ಸೇರುವಂತೆ ಮಾಡುತ್ತೇವೆ. ಒಂದು ವೇಳೆ ವೃದ್ಧೆಯು ಮನೆಯ ಆಂತರಿಕ ಕಲಹದಿಂದ ಕುಟುಂಬಸ್ಥರ ಮನೆಗೆ ಹೋಗಲು ಒಪ್ಪದಿದ್ದರೆ, ತಾತ್ಕಾಲಿಕವಾಗಿ ವೃದ್ಧಾಶ್ರಮಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಾ.ಪಂ. ಇಒ ಪವಿತ್ರಾ ಪಾಟೀಲ ತಿಳಿಸಿದ್ದಾರೆ.