ಕುಶಾಲನಗರ: ಪ್ರಾಚೀನ ಕಾಲದ ಪ್ರಮುಖ ಕಲೆಗಳಲ್ಲಿ ಒಂದಾದ ಯಕ್ಷಗಾನ ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ಅಗತ್ಯ ಎಂದು ಉಡುಪಿಯ ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನದ ಸಂಸ್ಥಾಪಕ ರಾಘವೇಂದ್ರ ಆಚಾರ್ಯ ಜನ್ಸಾಲೆ ಅಭಿಪ್ರಾಯಪಟ್ಟರು.
ಇಲ್ಲಿನ ಸ್ಥಳೀಯ ರೈತ ಭವನದಲ್ಲಿ ಗುರುವಾರ ಕುಶಾಲನಗರ ಮಿತ್ರ ಮಂಡಳಿ ಆಶ್ರಯದಲ್ಲಿ ಆಯೋಜಿಸಿದ್ದ ‘ಕವಿರತ್ನ ಕಾಳಿದಾಸ ಮತ್ತು ಹರಿಭಕ್ತ ಚಂದ್ರಹಾಸ’ ಯಕ್ಷಗಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಕ್ಷಗಾನ ಕರಾವಳಿ ಮತ್ತು ಕಾಸರಗೋಡು ಭಾಗಕ್ಕೆ ಸೀಮಿತವಾಗಿತ್ತು. ಇತ್ತೀಚೆಗೆ ಅದು ಬೇರೆ ಬೇರೆ ಕಡೆಗಳಲ್ಲೂ ಪ್ರದರ್ಶನ ಕಾಣುತ್ತಿರುವುದು ಸಂತೋಷದ ವಿಷಯ. ಜಿಲ್ಲೆಯಲ್ಲಿ ಕಲೆಯನ್ನು ಪ್ರೋತ್ಸಾಹಿಸುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಅಂತಹವರನ್ನು ಸಂಘಟಿಸಿ ಒಂದು ಸೂರಿನೆಡೆಗೆ ತರುವವರ ಕೊರತೆ ಕಾಣುತ್ತಿದೆ. ಆ ನಿಟ್ಟಿನಲ್ಲಿ ಕುಶಾಲನಗರದ ಮಿತ್ರ ಮಂಡಳಿ ಅದ್ಭುತವಾಗಿ ಕಾರ್ಯಕ್ರಮ ಆಯೋಜಿಸಿದೆ. ಹಾಗಾಗಿ ಇಂತಹ ಕಲಾವಿದರು, ಕಲೆಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಹೇಳಿದರು.
ಮಿತ್ರ ವೃಂದ ಅಧ್ಯಕ್ಷ ರಾಘವೇಂದ್ರ ಭಟ್ ಮಾತನಾಡಿದರು. ರಾತ್ರಿ 10 ಗಂಟೆಗೆ ಆರಂಭವಾದ ಪ್ರದರ್ಶನ ಶುಕ್ರವಾರ ಮುಂಜಾನೆ 4.30 ರವರೆಗೂ ನಡೆಯಿತು.
ಉಡುಪಿಯ ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನದ ಪ್ರಧಾನ ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ, ಕಲಾವಿದ ದಂಡಿನಮನೆ ಶ್ರೀಪಾದ ಭಟ್, ಸ್ತ್ರೀ ವೇಷಧಾರಿ ಸುಬ್ರಹ್ಮಣ್ಯ ಯಲಗೋಪ್ಪ, ಹಾಸ್ಯ ಕಲಾವಿದ ರವೀಂದ್ರ ದೇವಾಡಿಗ ಕಮಲಶಿಲೆ, ಕುಶಾಲನಗರ ಮಹಾಲಕ್ಷ್ಮೀ ದೇವಾಲಯದ ಅರ್ಚಕ, ಯಕ್ಷಗಾನ ಕಲಾವಿದ ಕೃಷ್ಣಮೂರ್ತಿ ಭಟ್ ಅವರನ್ನು ಸನ್ಮಾನಿಸಲಾಯಿತು.
ಪೆರ್ಡುರು ಮೇಳದ ವ್ಯವಸ್ಥಾಪಕ ಸುಬ್ರಹ್ಮಣ್ಯ ಶಾಸ್ತ್ರಿ, ಜನ್ಸಾಲೆ ಪ್ರತಿಷ್ಠಾನದ ಸುನೀಲ್ ಭಂಡಾರಿ ಕಡತೋಕಾ, ಅಕ್ಷಯ್ ಆಚಾರ್ಯ ಬಿದ್ದಲ್ ಕಟ್ಟೆ, ಕುಮಾರ್ ಅಮೀನ್, ಪ್ರಜ್ವಲ್ ಮುಂಡಾಡಿ, ಮಿತ್ರ ವೃಂದದ ಕಾರ್ಯದರ್ಶಿ ಗಿರೀಶ್ಭಟ್, ಎಂ.ವಿ.ನಾರಾಯಣ, ಚಿತ್ರ ರಮೇಶ್, ನವೀನ್ ಭಟ್ ಇತರರು ಹಾಜರಿದ್ದರು.