ಚಿತ್ರದುರ್ಗ: ನಗರದ ಜೈಲ್ರಸ್ತೆ ಮನೆಯಲ್ಲಿ ಅಸುನೀಗಿರುವ ಐವರ ಅಸ್ಥಿ ಪಂಜರಗಳ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀ ಬಸವೇಶ್ವರ ಮೆಡಿಕಲ್ ಕಾಲೇಜು ಶವಾಗಾರದಲ್ಲಿ ಶನಿವಾರ ವೈದ್ಯರಾದ ಆರ್.ಪಿ.ವೇಣು ಹಾಗೂ ಡಾ.ಶ್ರೀಕೃಷ್ಣ ಅವರ ನೇತೃತ್ವದಲ್ಲಿ ಮ ರಣೋತ್ತರ ಪರೀಕ್ಷೆ ನಡೆಯಿತು.
ಬಳಿಕ ಸಂಜೆ ವೇಳೆಗೆ ಮೃತರ ಸಂಬಂಧಿಕರಿಗೆ ಅಸ್ಥಿ ಪಂಜರಗಳನ್ನು ಹಸ್ತಾಂತರಿಸಲಾಯಿತು. ನಂತರದಲ್ಲಿ ನಗರದ ಜೋಗಿಮಟ್ಟಿ ರಸ್ತೆ ಮುಕ್ತಿ ಧಾಮದಲ್ಲಿ ಅಂತಿಮ ಸಂಸ್ಕಾರ ನಡೆಯಿತು.
ಪಾಳು ಬಿದ್ದ ಮನೆಯಲ್ಲಿ ವಾಸವಿದ್ದ ಚಿತ್ರದುರ್ಗ ತಾಲೂಕು ದೊಡ್ಡಸಿದ್ದವ್ವನಳ್ಳಿಯ ನಾಡಿಗ್ಮನೆತನದ ಎಸ್.ಕೆ.ಜಗನ್ನಾಥರೆಡ್ಡಿ,ಪತ್ನಿ ಎಂ. ಆರ್.ಪ್ರೇಮಾಲೀಲಾ,ಪುತ್ರಿ ಎನ್.ಜೆ.ತ್ರಿವೇಣಿ(56)ಪುತ್ರರಾದ ಎನ್.ಜೆ.ಕೃಷ್ಣ(ಬಾಬುರೆಡ್ಡಿ-53)ಹಾಗೂ ಎನ್.ಜೆ.ನರೇಂದ್ರ(51)ಅ ವರು ನಿಗೂಢವಾಗಿ ಮೃತ ಪಟ್ಟಿದ್ದು, ಇವರೆಲ್ಲರ ಸಾವಿನ ಕಾರಣವನ್ನು ವೈದ್ಯಾಧಿಕಾರಿಗಳು ಅಂತಿಮವಾಗಿ ಬಹಿರಂಗಪಡಿಸಬೇಕಿದೆ.
ಕೆಲಕಾಲ ಹಸ್ತಾಂತರ ವಿಳಂಬ
ಮರಣೋತ್ತರ ಪರೀಕ್ಷೆ ಬಳಿಕ ಜಗನ್ನಾಥ ರೆಡ್ಡಿ ಅವರ ದೊಡ್ಡಪ್ಪನ ಮಗ ತಿಮ್ಮಾರೆಡ್ಡಿ ಅವರಿಗೆ, ಅಸ್ಥಿಪಂಜರಗಳನ್ನು ಹಸ್ತಾಂತರಿಸಬೇಕಿ ತ್ತು. ಸಂಜೆ ನಾಲ್ಕರ ಸಮಯದಲ್ಲಿ ಪೋಸ್ಟ್ಮಾರ್ಟಮ್ ಪ್ರಕ್ರಿಯೆ ಪೂರ್ಣಗೊಂಡಿತ್ತು. ಇನ್ನೇನು ಸಂಬಂಧಿಕರಿಗೆ ಹಸ್ತಾಂತರಿಸಬೇಕೆನ್ನುವ ಸಂದರ್ಭದಲ್ಲಿ ಪೊಲೀಸ್ ಹಿರಿಯ ಅಧಿಕಾರಿಗಳಿಂದ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಮಾಹಿತಿ ರವಾನೆಯಾಯಿತು. ಸ್ಥಳಕ್ಕೆ ಬಂದ ಅಡಿಷನಲ್ ಎಸ್ಪಿ ಕುಮಾರಸ್ವಾಮಿ ಹಾಗೂ ತನಿಖಾಧಿಕಾರಿ ನಯೀಂಅಹಮದ್, ಸಂಬಂಧಿಕರಿಬ್ಬರನ್ನು ತಮ್ಮೊಂದಿಗೆ ಹಿರಿಯ ಅಧಿಕಾರಿಗಳ ಜತೆ ಸಮಾಲೋಚನೆಗಾಗಿ ಕರೆದುಕೊಂಡು ಹೋದರು.
ಮುಕ್ತಿಧಾಮದಲ್ಲಿ ಶವ ಸಂಸ್ಕಾರ
ನಗರದ ಜೋಗಿಮಟ್ಟಿ ರಸ್ತೆ ಮುಕ್ತಿಧಾಮದಲ್ಲಿ ಅಗ್ನಿಸ್ಪರ್ಶದ ಮೂಲಕ ದಂಪತಿ ಹಾಗೂ ಅವರ ಮೂವರು ಮಕ್ಕಳ ಪ್ರತ್ಯೇಕ ಅಂತಿಮ ಸಂಸ್ಕಾರಕ್ಕೆ ಸಂಬಂಧಿಕರು ನಿರ್ಧರಿಸಿದ್ದರು. ಒಂದು ವೇಳೆ ಅಗ್ನಿಸ್ಪರ್ಶವಾದರೆ, ಮುಂದೆ ತನಿಖೆಗೆ ಬೇಕಾದರೆ ಸಾಕ್ಷಿ ಇರುವುದಿಲ್ಲ ಎಂಬ ಕಾರಣಕ್ಕೆ ಹೂಳುವಂತೆ ಪೊಲೀಸರು ಸೂಚಿಸಿದರು. ಅದರಂತೆ ಅಂತಿಮ ಸಂಸ್ಕಾರ ನಡೆಯಿತು.
ಹಾಜರಿದ್ದ ಸಂಬಂಧಿಕರು
ಮೂರು ದಿನದ ಕಾರ್ಯದ ಬಳಿಕ ನಂತರ 9 ಅಥವಾ 11 ದಿನದ ಸಮಾರಾಧನೆ ನಡೆಸಲಾಗುತ್ತದೆ ಎಂದು ಸಂಬಂಧಿ ಕೊಲ್ಲಿಲಕ್ಷ್ಮೀ ತಿಳಿಸಿ ದರು. ಬೆಂಗಳೂರು, ದುರ್ಗ ಹಾಗೂ ಡಿಎಸ್ಹಳ್ಳಿ ಮತ್ತಿತರೆಡೆಯಿಂದ ಮೃತರ ಸಂಬಂಧಿಕರು ಬಂದಿದ್ದರು. ಮೃತ ಪ್ರೇಮಲೀಲಾ ಅವರ ಸಹೋದರಿ ನಾಗಮ್ಮ, ಪವನ್ಕುಮಾರ್, ವೆಂಕಟೇಶ್ರೆಡ್ಡಿ, ಲಲಿತಮ್ಮ, ಪುರುಷೋತ್ತಮ ರೆಡ್ಡಿ, ವಿಜಯಕುಮಾರ್, ರವಿನಾರಾಯಣರೆಡ್ಡಿ, ಭೀಮಾರೆಡ್ಡಿ, ಪ್ರಕಾಶ್, ಪ್ರಹ್ಲಾದ್ರೆಡ್ಡಿ ಮೊದಲಾದ ಸಂಬಂಧಿಕರು ಇದ್ದರು.
ತುಮಕೂರಲ್ಲಿ ನಿವೃತ್ತಿಯಾಗಿದ್ದ ಜಗನ್ನಾಥರೆಡ್ಡಿ ಅವರಿಗೆ ಗುಬ್ಬಿಯಲ್ಲೂ ಜಮೀನು ಇತ್ತು ಎನ್ನಲಾಗಿದೆ. ಡಿಎಸ್ ಹಳ್ಳಿಯಲ್ಲಿದ್ದ ಅಂದಾಜು 50 ಎಕರೆ ಜಮೀನಲ್ಲಿ 25 ಎಕರೆ ಮಾರಾಟ ಮಾಡಿದ್ದರು. ಉಳಿದ ಜಮೀನಿನಲ್ಲಿ ಸ್ಪಲ್ಪ ಲೇಔಟ್ ಮಾಡಲು ಕೊಟ್ಟಿದ್ದರು.
ಡೆತ್ನೋಟ್?
ಡೆತ್ನೋಟ್ ಸಿಕ್ಕಿದೆ, ತಮ್ಮ ಸಾವಿಗೆ ಇಂಥವರೇ ಕಾರಣ ಎಂಬಿತ್ಯಾದಿ ಬರಹ ಅದರಲ್ಲಿದೆ ಎಂಬ ಸುದ್ದಿ ಹರಿದಾಡುತ್ತಿದ್ದರೂ ಎಸ್ಪಿ ಧರ್ಮೇಂದರ್ಕುಮಾರ್ಮೀನಾ ಅವರು, ಸದ್ಯಕ್ಕಂತೂ ಯಾವುದೇ ಡೆತ್ನೋಟ್ ಸಿಕ್ಕಿಲ್ಲವೆಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಪೋಸ್ಟ್ಮಾರ್ಟಮ್ ಪೂರ್ಣಗೊಂಡಿದ್ದು, ವರದಿ ಸಿದ್ಧವಾಗಬೇಕಿದೆ ಎಂದು ಡಾ.ವೇಣು ತಿಳಿಸಿದ್ದಾರೆ. ಪ್ರಕರಣದ ರಹಸ್ಯವನ್ನು ಭೇ ದಿಸುವ ನಿಟ್ಟಿನಲ್ಲಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ. ಪೂರಕವಾಗಿ ಹಲವರಿಂದ ಮಾಹಿತಿ, ಹೇಳಿಕೆ ಪಡೆ ಯುವ ಕಾರ್ಯವನ್ನು ಚುರುಕುಗೊಳಿಸಿದ್ದಾರೆ.
ವೈರಲ್ ಆದ ವಿಡಿಯೊ
ಅಸ್ಥಿ ಪಂಜರಗಳ ವಿಚಾರ ಬಹಿರಂಗವಾಗುವ ಮುನ್ನ, ಈ ಸಂಬಂಧ ವಿಡಿಯೊವೊಂದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೊವನ್ನು ಕೆಲವು ಹುಡುಗರು ಚಿತ್ರೀಕರಿಸಿದ್ದಾರೆನ್ನಲಾಗಿದೆ.