ಹೊಸನಗರ: ನಶಿಸಿ ಹೋಗುತ್ತಿರುವ ಗ್ರಾಮೀಣ ಕ್ರೀಡೆ ಮತ್ತು ಕಲೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಗ್ರಾಪಂನಿಂದ ಕ್ರೀಡಾಕೂಟ ಏರ್ಪಡಿಸಲಾಗಿದೆ ಎಂದು ಮಾರುತಿಪುರ ಗ್ರಾಪಂ ಒಕ್ಕೂಟದ ಅಧ್ಯಕ್ಷ ಎಚ್.ಬಿ ಚಿದಂಬರ್ ಹೇಳಿದರು.
ಭಾನುವಾರ ಮಾರುತಿಪುರದಲ್ಲಿ ಆಯೋಜಿಸಿದ್ದ ಗ್ರಾಮೀಣ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರದ ಸೂಚನೆ ಇದ್ದರೂ ಬಹುತೇಕ ಪಂಚಾಯತಿಗಳು ಗ್ರಾಮೀಣ ಕ್ರೀಡಾಕೂಟ ನಡೆಸುವುದಕ್ಕೆ ಮುಂದಾಗುತ್ತಿಲ್ಲ. ಈ ಬಾರಿ ನಮ್ಮ ಪಂಚಾಯಿತಿ ವಿಶೇಷ ಆಸಕ್ತಿ ವಹಿಸಿ ಕ್ರೀಡಾಕೂಟ ಹಮ್ಮಿಕೊಂಡಿದ್ದು, ಜನಸ್ಪಂದನ ಉತ್ತಮವಾಗಿದೆ ಎಂದರು.
ಜನಪದ ಕಲೆ ಮತ್ತು ಕ್ರೀಡೆಗಳು ಜನಪದೀಯರ ಜೀವನಶೈಲಿಯೂ ಹೌದು. ಪ್ರಸ್ತುತ ಒತ್ತಡದ ಬದುಕಿನಲ್ಲಿ ಒಂದಷ್ಟು ಬದಲಾವಣೆ ಮತ್ತು ಸಂತೋಷವನ್ನು ಹೊಂದಲು ಇಂತಹ ಕಾರ್ಯಕ್ರಮಗಳು ಅಗತ್ಯವಾಗಿದೆ ಎಂದು ಹೇಳಿದರು.
ಪಿಡಿಒ ಉಮೇಶ್ ಮಾತನಾಡಿ, ಇಂದಿನ ಯುವಪೀಳಿಗೆ ಕಬಡ್ಡಿ, ಖೋ-ಖೋ, ಹಗ್ಗ ಜಗ್ಗಾಟ, ಥ್ರೋಬಾಲ್ ಮತ್ತು ಜಾನಪದ ಗೀತೆ ಗಾಯನ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿರುವುದು ಕಂಡಾಗ ಗ್ರಾಮೀಣ ಕ್ರೀಡೆ ಮತ್ತು ಕಲೆಯಲ್ಲಿ ಆಸಕ್ತಿ ಇರುವುದು ತಿಳಿದು ಬರುತ್ತದೆ ಎಂದರು.