ಬೆಳಗಾವಿ: ಮಹಿಳೆಯರು ನಾಲ್ಕು ಗೋಡೆಗಳಿಂದ ಹೊರಬಂದು ಬದುಕು ಕಟ್ಟಿಕೊಳ್ಳಬೇಕು ಎಂದು ಸಂಸದೆ ಮಂಗಲ ಅಂಗಡಿ ಹೇಳಿದರು.
ನಗರದ ಹಿಂದವಾಡಿಯ ಕ್ರಾಂತಿ ಮಹಿಳಾ ಮಂಡಳ ಮತ್ತು ಉಮಾ ಸಂಗೀತ ಪ್ರತಿಷ್ಠಾನದಿಂದ ಮಕ್ಕಳ ಕಲ್ಯಾಣ ಮತ್ತು ಮಹಿಳಾ ಸಬಲೀಕರಣದ ಉದ್ದೇಶದಡಿ ಟಿಳಕವಾಡಿ ಆರ್ಷ ವಿದ್ಯಾ ಆಶ್ರಮದಲ್ಲಿ ಬುಧವಾರ ಏರ್ಪಡಿಸಿದ್ದ ಮುತ್ತುಗಳಿಂದ ತಯಾರಿಸುವ ಕರಕುಶಲ ವಸ್ತುಗಳ ತರಬೇತಿ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗೃಹಿಣಿಯರು ಕುಟುಂಬ ನಿರ್ವಹಣೆ ಜತೆಗೆ ಸ್ವ-ಉದ್ಯೋಗದ ಮೂಲಕ ಸಬಲರಾಗಿ ಸಮಾಜಸೇವೆಯಲ್ಲಿ ತೊಡಗಬೇಕು. ಹಿಂದವಾಡಿಯ ಮಹಿಳೆಯರು ಸಂಘ ಕಟ್ಟಿ 15 ವರ್ಷದಿಂದ ಸಮಾಜಸೇವೆಯಲ್ಲಿ ತೊಡಗಿರುವುದು ಶ್ಲಾಘನೀಯ ಎಂದರು.
ಸಾನ್ನಿಧ್ಯ ವಹಿಸಿದ್ದ ಚಿತ್ಪ್ರಕಾಶಾನಂದ ಸ್ವಾಮೀಜಿ ಮಾತನಾಡಿ, ನಮ್ಮ ಆಶ್ರಮದ ಮಕ್ಕಳು ಆರ್ಥಿಕವಾಗಿ ಸಬಲೀಕರಣಗೊಳ್ಳುವ ಉದ್ದೇಶದಿಂದ ಶಿಬಿರ ಆಯೋಜಿಸಿದ್ದು ಸ್ವಾಗತಾರ್ಹ ಎಂದರು.
ಕಾರ್ಯದರ್ಶಿ ರತ್ನಶ್ರೀ ಗುಡೇರ ಮಾತನಾಡಿ, ಮಹಿಳಾ ಮಂಡಳ ಮತ್ತು ಉಮಾ ಸಂಗೀತ ಪ್ರತಿಷ್ಠಾನದ ಕಾರ್ಯ ಮತ್ತು ಈ ಶಿಬಿರದ ಉದ್ದೇಶ ವಿವರಿಸಿದರು. ಸಂಸದೆ ಮಂಗಲ ಅಂಗಡಿ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕಿ ಮೈನಾ ಕುಲಕರ್ಣಿ, ರಾಜಶ್ರೀ ಕಾಗವಾಡ, ಅಕ್ಷತಾ ಪಾಟೀಲ, ಭಾರತಿ ರತ್ನಪ್ಪಗೋಳ, ಹೇಮಾ ಭರಬರಿ, ಜ್ಯೋತಿ ಜಂತಿ ಇತರರಿದ್ದರು. ಕಾಂಚನ ಕಲ್ಯಾಣಶೆಟ್ಟಿ, ಅನಿತಾ ಜಕ್ಕಣ್ಣವರ ಪ್ರಾರ್ಥಿಸಿದರು. ಕ್ರಾಂತಿ ಮಹಿಳಾ ಮಂಡಳ ಅಧ್ಯಕ್ಷೆ ಮಂಗಲ ಮಠದ ಸ್ವಾಗತಿಸಿದರು. ಗೀತಾ ಎಮ್ಮಿ ನಿರೂಪಿಸಿದರು. ಮಮತಾ ಅಂಟಿನ ವಂದಿಸಿದರು.