ಬೆಳಗಾವಿ: ಜಿಲ್ಲೆಯಲ್ಲಿ 25 ವರ್ಷಗಳಿಂದ ಜಿಲ್ಲಾಡಳಿತ ಮತ್ತು ಸಮಸ್ತ ಜೈನ ಸಮುದಾಯದಿಂದ ಭಗವಾನ ಮಹಾವೀರ ಜನ್ಮಕಲ್ಯಾಣಕ ಮಹೋತ್ಸವ ಆಚರಣೆ ಮಾಡುತ್ತ ಬಂದಿದ್ದು, ಈ ವರ್ಷವೂ ಏ.4ರಂದು ಆಚರಿಸಲಾಗುವುದು ಎಂದು ಮಧ್ಯವರ್ತಿ ಉತ್ಸವ ಸಮಿತಿ ಗೌರವ ಕಾರ್ಯದರ್ಶಿ ರಾಜೇಂದ್ರ ಜೈನ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹೋತ್ಸವ ನಿಮಿತ್ತ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾ.30ರಂದು ಉತ್ಸವ ಸಖಿ ಅವರಿಂದ ರಂಗೋಲಿ, ಗುಂಪು ನೃತ್ಯ, ಫ್ಯಾಷನ್ ಶೋ, ಕಳಶ ಅಲಂಕಾರ, ಚಿತ್ರಕಲೆ, ಧಾರ್ಮಿಕ ಫ್ಯಾನ್ಸಿಡ್ರೆಸ್ ಮತ್ತು ಮಿಥುನ ಶಾಸ್ತ್ರೀ ಹಾಗೂ ಅನೇಕಾಂತಶಾಸ್ತ್ರೀ ಅವರಿಂದ ಸಂಗೀತಮಯ ಭಕ್ತಿ ಸಂಜೆ ಕಾರ್ಯಕ್ರಮ ನಡೆಯಲಿದೆ.
ಏ.1ರಂದು ನೃತ್ಯ ಸ್ಪರ್ಧೆ, ಭಜನಾ ಸ್ಪರ್ಧೆ, ರಾಣಿ ಅಬ್ಬಕ್ಕಾದೇವಿ ನಾಟಕ, ರಾಜ್ಯ ಮತ್ತು ರಾಷ್ಟ್ರಮಟ್ಟದ ವಿಶೇಷ ವಿಜೇತರಿಗೆ ಪ್ರತಿಭಾ ಪುರಸ್ಕಾರ ವಿತರಣೆ ನಡೆಯಲಿದೆ. ಎಲ್ಲ ಕಾರ್ಯಕ್ರಮ ಹಿಂದವಾಡಿಯ ಮಹಾವೀರ ಭವನದಲ್ಲಿ ನಡೆಯಲಿವೆ ಎಂದರು.
ವಿನಯ ಬಾಳಿಕಾಯಿ ಮಾತನಾಡಿ, ಏ.2ರಂದು ಬೆಳಗ್ಗೆ 5ಕ್ಕೆ ಜಿತೋ ಲೇಡಿಂಗ್ವಿಂಗ್ ವತಿಯಿಂದ ಬೆಳಗಾವಿಯಲ್ಲಿ ಅಹಿಂಸಾ ರನ್ ಮ್ಯಾರಥಾನ್ ನಡೆಯಲಿದೆ ಎಂದರು. ಅಭಯ ಅವಲಕ್ಕಿ ಮಾತನಾಡಿ, ಈ ಬಾರಿಯ ಶೋಭಾಯಾತ್ರೆಯಲ್ಲಿ ಬೆಳಗ್ಗೆ ಮೋಟಾರ್ ರ್ಯಾಲಿ ನಡೆಯಲಿದೆ. ಅದರಂತೆ ಶೋಭಾಯಾತ್ರೆಯಲ್ಲಿ 60 ರೂಪಕ ವಾಹನ ಭಾಗವಹಿಸಲಿದ್ದು, ಭಗವಾನ ಮಹಾವೀರರ ಸಂದೇಶ ಸಾರುವ ರೂಪಕ ವಾಹನಗಳಿರುತ್ತವೆ ಎಂದು ಹೇಳಿದರು.
ಸಮಿತಿ ಗೌರವ ಕಾರ್ಯಾಧ್ಯಕ್ಷ ಶ್ರೀಪಾಲ ಖೇಮಲಾಪುರೆ ಮಾತನಾಡಿ, ಏ. 4ರಂದು ಬೆಳಗ್ಗೆ 8ಕ್ಕೆ ಬೆಳಗಾವಿ ನಗರದ ಸಮಾದೇವಿ ಗಲ್ಲಿಯಿಂದ ಶೋಭಾಯಾತ್ರೆ ಪ್ರಾರಂಭವಾಗುವುದು. ನಂತರ ರಾಮದೇವ ಗಲ್ಲಿ, ಕಿರ್ಲೋಸ್ಕರ್ ರಸ್ತೆ, ರಾಮಲಿಂಗಖಿಂಡ್ ಗಲ್ಲಿ, ಟಿಳಕಚೌಕ, ಶೇರಿ ಗಲ್ಲಿ, ಶನಿ ಮಂದಿರ, ಎಸ್.ಪಿ.ಎಂ.ರಸ್ತೆ, ಕೋರೆ ಗಲ್ಲಿ, ಶಹಾಪುರ ಗೋವಾವೇಸ್ ಮೂಲಕ ಮಹಾವೀರ ಭವನದಲ್ಲಿ ಮುಕ್ತಾಯವಾಗಲಿದೆ. ನಂತರ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದರು. ಪ್ರಚಾರ ಸಮಿತಿ ಅಧ್ಯಕ್ಷ ಕುಂತಿನಾಥ ಕಲಮನಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.