ಸಿದ್ದಾಪುರ: ಮಳೆ-ಗಾಳಿಗೆ ಅಡಕೆ ಮರಗಳು ಮುರಿದು ಬಿದ್ದು ಅವುಗಳನ್ನು ತೆರವುಗೊಳಿಸುವ ಮುನ್ನವೇ ಈಗ ಕೊಳೆ ರೋಗ ಕಾಣಿಸಿಕೊಂಡಿದ್ದು, ಬೆಳೆಗಾರರನ್ನು ಚಿಂತೆಗೀಡುಮಾಡಿದೆ.
ಕ್ಯಾದಗಿ, ದೊಡ್ಮನೆ, ಬಿದ್ರಕಾನ, ಇಟಗಿ, ಲಂಬಾಪುರ, ಹೆಗ್ಗರಣಿ, ಹಾರ್ಸಿಕಟ್ಟಾ, ನಿಲ್ಕುಂದ, ಅಣಲೇಬೈಲ್, ಹಸರಗೋಡ ಗ್ರಾಪಂ ವ್ಯಾಪ್ತಿಯಲ್ಲಿ ರೋಗ ಹರಡಿದ್ದು, ಅವುಗಳನ್ನು ತೆರವುಗೊಳಿಸುವುದು ಹೇಗಪ್ಪ ಎಂದು ಬೆಳಗಾರರು ಚಿಂತಿತರಾಗಿದ್ದಾರೆ.
ರೋಗದ ನಿಯಂತ್ರಣಕ್ಕೆ ಈಗಾಗಲೇ ಎರಡು ಭಾರಿ ಬೋಡೋ ಮಿಶ್ರಣ ಸಿಂಪಡಿಸಲಾಗಿದೆ. ಆದರೂ ಕೊಳೆ ರೋಗ ಕಾಣಿಸಿಕೊಂಡಿದೆ ಎಂದು ಕ್ಯಾದಗಿ ಸಮೀಪದ ಲಕ್ಕಿಜಡ್ಡಿಯ ಕೃಷಿಕ ಮಹೇಶ ಹೆಗಡೆ ಹೇಳುತ್ತಾರೆ.
ಗಾಳಿ-ಮಳೆಗೆ ಶೇ.35ಕ್ಕೂ ಹೆಚ್ಚು ಅಡಕೆ ಬೆಳೆ ಹಾನಿ ಆಗಿದೆ. ಈಗ ಕೊಳೆ ರೋಗ ಕಾಣಿಸಿಕೊಂಡಿರುವುದರಿಂದ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬೆಳೆ ಹಾನಿ ಆದ ಕುರಿತು ತೋಟಗಾರಿಕೆ ಇಲಾಖೆ ಸರಿಯಾಗಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. | ಸುಧೀರ್ ಬಿ.ಗೌಡರ್ ಅಧ್ಯಕ್ಷರು, ತಾಪಂ ಸಿದ್ದಾಪುರ