ಯಳಂದೂರು: ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ರೈತನನ್ನು ಕಂಗೆಡಿಸಿದೆ. ಭತ್ತದ ಬೆಳೆಯು ಕಟಾವಿಗೆ ಬಂದಿದ್ದು, ತೇವಾಂಶ ಹೆಚ್ಚಾಗಿ ಕೊಯ್ಲು ಮಾಡಲು ಸಾಧ್ಯವಾಗದಂತಾಗಿದೆ. ಹೀಗಾಗಿ ಈ ಬಾರಿಯೂ ಭತ್ತದ ಫಸಲು ನಷ್ಟವಾಗುವ ಭೀತಿ ಎದುರಾಗಿದೆ.
ತಾಲೂಕಿನ ವ್ಯಾಪ್ತಿಯಲ್ಲಿ ಒಟ್ಟು 2 ಸಾವಿರ ಹೆಕ್ಟೇರ್ ಹೆಚ್ಚು ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಆದರೆ ನಿರಂತರ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಹೊಲಗದ್ದೆಗಳಲ್ಲಿ ನೀರು ನಿಂತು ಬೆಳೆ ಹಾಳಾಗುವ ಹಂತ ತಲುಪಿದೆ. ಮಳೆಯಿಂದಾಗಿ ಬೆಳೆ ಕಟಾವು ಮಾಡುವುದು ರೈತರಿಗೆ ಕಷ್ಟವಾಗಿದೆ.
ಬೆಳೆ ನೆಲಕ್ಕೆ ಬಿದ್ದು ಮೊಳಕೆ ಬರುತ್ತಿದ್ದು, ರೈತರು ನಷ್ಟ ಅನುಭವಿಸುವ ಸಾಧ್ಯತೆ ಹೆಚ್ಚಾಗಿದೆ. ಅತಿ ಹೆಚ್ಚು ಮಳೆ ಮತ್ತು ವಾತಾವರಣದಲ್ಲಾದ ಬದಲಾವಣೆಯಿಂದಾಗಿ ಭತ್ತದ ಬೆಳೆ, ಕಬ್ಬು, ಜೋಳ, ರಾಗಿ, ತರಕಾರಿಯಲ್ಲಿ ಕೀಟಬಾಧೆ ಹೆಚ್ಚಾಗಿದ್ದು, ಇದರ ನಿಯಂತ್ರಣಕ್ಕೆ ಔಷಧ ಸಿಂಪಡಣೆಗೂ ಮಳೆ ಬಿಡುವು ನೀಡದಿರುವುದರಿಂದ ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ.