ಡಂಬಳ: ಸತತ ಸುರಿಯುತ್ತಿರುವ ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಿ ಗ್ರಾಮದ ವ್ಯಾಪ್ತಿಯ ಬೆಳೆಗಳೆಲ್ಲ ಕೊಳೆಯಲಾರಂಭಿಸಿವೆ.ಗ್ರಾಮದ ವಿಕ್ಟೋರಿಯಾ ಮಹಾರಾಣಿ ಕೆರೆಯ ಕೋಡಿ ತುಂಬಿದ್ದು, ವಡ್ಡವನ ಹಳ್ಳವೂ ಭರ್ತಿಯಾಗಿ ಹರಿಯುತ್ತಿದೆ. ಹಳ್ಳದ ಪಕ್ಕದ ಬಸಪ್ಪ ಬಂಡಿ ಅವರ ಜಮೀನಿಗೆ ಸೋಮವಾರ ನೀರು ನುಗ್ಗಿ ಎರಡು ಎಕರೆ ಉಳ್ಳಾಗಡ್ಡಿ, ಒಂದು ಎಕರೆ ಹತ್ತಿ ಬೆಳೆ ಜಲಾವೃತವಾಗಿದೆ. ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ, ಕೂಲಿ ಕಾರ್ವಿುಕರ ಪಗಾರ ಸೇರಿ 2 ಎಕರೆ ಉಳ್ಳಾಗಡ್ಡಿ ಬೆಳೆಯಲು 40 ಸಾವಿರ ರೂ., ಎಕರೆ ಹತ್ತಿ ಬೆಳೆಗೆ 25 ಸಾವಿರ ರೂ. ವ್ಯಯಿಸಲಾಗಿದೆ. ಸತತ ಮಳೆಯಿಂದ ಬೆಳೆಗಳು ಕೊಳೆ ರೋಗ ಹಾಗೂ ಹಳ್ಳದ ನೀರು ನುಗ್ಗಿ ಸಂಪೂರ್ಣ ಕೊಳೆಯಲಾರಂಭಿಸಿವೆ. ಇದರಿಂದ ಮಾಡಿದ ಖರ್ಚು ಬಾರದಂತಾಗಿದೆ. ಬೆಳೆ ಹಾನಿ ಪರಿಶೀಲನೆಗೆ ಸಂಬಂಧಪಟ್ಟ ಅಧಿಕಾರಿಗಳು ಇದುವರೆಗೂ ಬಂದಿಲ್ಲ ಎಂದು ಗ್ರಾಮದ ರೈತ ಬಸಪ್ಪ ಬಂಡಿ ಹೇಳಿದರು.