ಸಿದ್ದಾಪುರ: ಮಕ್ಕಳ ಮಿದುಳಿನ ಬೆಳವಣಿಗೆಗೆ ಮಲೆನಾಡು ಗಿಡ್ಡ ಗೋವಿನ ತಳಿಯ ಹಾಲಿನ ಸೇವನೆ ಉಪಯುಕ್ತ ಎಂದು ಬೆಂಗಳೂರಿನ ದಕ್ಷಿಣ ಕಚೇರಿಯ ರಾಷ್ಟ್ರೀಯ ಹೈನು ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಕೆ.ಪಿ. ರಮೇಶ್ ಹೇಳಿದರು.
ತಾಲೂಕಿನ ಭಾನ್ಕುಳಿಮಠದ ಗೋ ಸ್ವರ್ಗದಲ್ಲಿ ನಡೆಯುತ್ತಿರುವ ಗೋ ದಿನ ಹಾಗೂ ಆಲೆಮನೆ ಹಬ್ಬದಲ್ಲಿ ಹಮ್ಮಿಕೊಂಡಿದ್ದ ಮಲೆನಾಡು ಗಿಡ್ಡ ಗೋ ತಳಿ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮಲೆನಾಡು ಗಿಡ್ಡ ಕರ್ನಾಟಕದ ವಿಶೇಷ ಗೋವಿನ ತಳಿ ಎಂದು ಗುರುತಿಸಲಾಗಿದೆ. ಇದು ಹೆಮ್ಮೆಯ ವಿಷಯವಾಗಿದ್ದು, ಇದಕ್ಕೆ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಪೂರಕ ಶಕ್ತಿಯಾಗಿದ್ದಾರೆ. ಒಂದು ಮಗುವಿನ ಮಿದುಳಿನ ಬೆಳವಣಿಗೆಗೆ ಬೇರೆಲ್ಲಾ ಗೋವಿನ ತಳಿಗಳಿಗಿಂತ ಮಲೆನಾಡು ಗಿಡ್ಡ ಆಕಳಿನ ಹಾಲಿನ ಸೇವನೆ ಉಪಯುಕ್ತ ಎನ್ನುವುದನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ವಿವರಿಸಿದರು.
ಶಿವಮೊಗ್ಗದ ಪಶು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ. ಜಯಶ್ರೀ ಮಾತನಾಡಿ, ಗ್ರಾಮೀಣ ಅಭಿವೃದ್ಧಿಗೆ ಮಲೆನಾಡು ಗಿಡ್ಡ ಗೋವಿನ ತಳಿ ಪೂರಕ. ಮಲೆನಾಡು ಗಿಡ್ಡ ಗೋ ತಳಿಯ ಹಾಲಿನಿಂದ ಮಾಡಿದ ಐಸ್ ಕ್ರೀಂನಲ್ಲಿ ಹೆಚ್ಚಿನ ಪೋಷಕಾಂಶಗಳು ಇರುತ್ತದೆ. ಗಿಡ್ಡ ತಳಿಯ ಹೋರಿಗಳನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ಸ್ವಾವಲಂಬನೆಯ ಬದುಕು ಸಾಗಿಸಬಹುದು ಎಂದರು.
ಪ್ರಗತಿಪರ ಕೃಷಿಕ ಪ್ರಕಾಶ ಮೇಸ್ತ, ಗೋ ದಿನ ಸಮಿತಿ ಅಧ್ಯಕ್ಷ ಎಂ.ಜಿ. ರಾಮಚಂದ್ರ, ಗೋಷ್ಠಿ ಸಂಚಾಲಕ ರಾಧಾಕೃಷ್ಣ ಉಪಸ್ಥಿತರಿದ್ದರು.
ಶ್ರೀಗಳಿಗೆ ಸ್ವಾಗತ: ಭಾನ್ಕುಳಿಮಠದ ಗೋ ಸ್ವರ್ಗಕ್ಕೆ ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಶುಕ್ರವಾರ ಸಂಜೆ ಆಗಮಿಸಿದ್ದು, ಅವರನ್ನು ಗೋದಿನ ಸಮಿತಿಯಿಂದ ಸ್ವಾಗತಿಸಲಾಯಿತು.