ವಿರಾಜಪೇಟೆ: ವಿರಾಜಪೇಟೆಯ ಮಲೆತಿರಿಕೆ ಬೆಟ್ಟದ ಶ್ರೀ ಮಲೆ ಮಹದೇಶ್ವರರ ವಾರ್ಷಿಕ ಉತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಮಗ್ಗುಲ, ಚಂಬೆಬೆಳ್ಳೂರು, ಕುಕ್ಲೂರು, ಐಮಂಗಲ ಗ್ರಾಮಸ್ಥರು ಸೇರಿ ಆರು ದಿನಗಳ ಕಾಲ ಉತ್ಸವದಲ್ಲಿ ಭಾಗವಹಿಸಿದ್ದರು. ಶನಿವಾರ ದೊಡ್ಡಹಬ್ಬ ನಡೆಯಿತು.
ಬೆಳಗ್ಗೆಯಿಂದಲೇ ಮಲೆ ಮಹದೇಶ್ವರರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಮಧ್ಯಾಹ್ನದ ವೇಳೆ ನೆರಪು, ಮಗ್ಗುಲ ಗ್ರಾಮದಿಂದ ಎತ್ತ್ ಪೋರಾಟ, ಕುಂದಿರ ಐನ್ ಮನೆಯಿಂದ ಭಂಡಾರ ಬರುವುದು, ತೆಂಗಿನಕಾಯಿಗೆ ಗುಂಡು ಹೊಡೆಯುವುದು, ದೇವರಿಗೆ ಮಹಾಪೂಜೆ, ಪ್ರಸಾದ ವಿನಿಯೋಗ ಬಳಿಕ ಅನ್ನಸಂತರ್ಪಣೆ ನಡೆಯಿತು.
ಸಂಜೆ 6 ಗಂಟೆಗೆ ವಾದ್ಯಗೋಷ್ಠಿಯೊಂದಿಗೆ ದೇವರ ಉತ್ಸವ ಮೂರ್ತಿಗೆ ವಿರಾಜಪೇಟೆ ಸುಂಕದಕಟ್ಟೆ, ಮುಖ್ಯ ರಸ್ತೆಯ ತೆಲುಗರ ಬೀದಿ ಮಾರಿಯಮ್ಮ ದೇವಸ್ಥಾನದಲ್ಲಿ ಪೂಜೆ ನೆರವೇರಿಸಲಾಯಿತು. ಜೈನರ ಬೀದಿಯ ಬಸವೇಶ್ವರ ದೇವಾಲಯದಲ್ಲಿ ಸಿಡಿಮದ್ದು ಸಿಡಿಸಲಾಯಿತು.
ನಂತರ ಶ್ರೀ ಮಹಾಗಣಪತಿ ದೇವಾಲಯದ ಬಳಿ, ದೇವಾಂಗ ಬೀದಿಯಲ್ಲಿರುವ ಶ್ರೀ ಪಾರ್ವತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ದೇವರ ಉತ್ಸವ ಮೂರ್ತಿಯೂ ಮಲೆತಿರಿಕೆ ಬೆಟ್ಟದ ಮಲೆ ಮಹಾದೇಶ್ವರ ದೇವಾಲಯಕ್ಕೆ ವಾಪಸ್ ತರಲಾಯಿತು.
ಭಾನುವಾರ ಸಂಜೆ ಅವಭೃತ ಸ್ನಾನ, ಸೋಮವಾರ ಕೊಡಿಮರ ಇಳಿಸುವುದು (ಕಳಮಡಕವೊ) ಅಪರಾಹ್ನ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು.